ದ.ಕ.ಸಹಕಾರಿ ನೌಕರರ ಸಂಘದ ‘ಉನ್ನತಿ’ ಕಟ್ಟಡ ಉದ್ಘಾಟನೆ

ಮಂಗಳೂರು, ಡಿ.1: ನಗರದ ಕೊಡಿಯಾಲ್ಬೈಲ್ನ ಪಿವಿಎಸ್ ಕಲಾಕುಂಜ ಸಮೀಪದ ದ.ಕ. ಸಹಕಾರಿ ನೌಕರರ ಸಂಘದ ನೂತನವಾದ ‘ಉನ್ನತಿ’ ಕಟ್ಟಡವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ರವಿವಾರ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ದೇಶದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಹಕಾರಿ ಸಂಘಗಳು ಲಾಭದಾಯಕವಾಗಿವೆ. ಇವು ಸ್ಥಳೀಯರೊಂದಿಗೆ ಅವಿನಾಭವ ಸಂಬಂಧಗಳನ್ನು ಹೊಂದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.
ದೊಡ್ಡ ಬ್ಯಾಂಕ್ಗಳಲ್ಲಿ ಸಾಲ ಒದಗಿಸಲು ಹಲವು ದಿನಗಳ ಕಾಲಾವಕಾಶದ ಅಗತ್ಯವಿದೆ. ಆದರೆ ಸಹಕಾರಿ ಸಂಘದ ಬ್ಯಾಂಕ್ಗಳಲ್ಲಿ ಕೇವಲ ಒಂದೇ ದಿನದಲ್ಲಿ ಸಾಲ ಮಂಜೂರಾಗುತ್ತದೆ. ಸಹಕಾರಿ ಕ್ಷೇತ್ರ ದೇಶದಲ್ಲಿ ಬಲಿಷ್ಠವಾಗಿದೆ. ದ.ಕ. ಜಿಲ್ಲೆಯು ಸಹಕಾರಿ ಕ್ಷೇತ್ರ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹಲವು ಬ್ಯಾಂಕ್ಗಳ ತವರು ಎನಿಸಿದೆ ಎಂದರು.
ದ.ಕ.ಸಹಕಾರಿ ನೌಕರರ ಸಂಘವು 43 ಕೋಟಿ ರೂ. ಠೇವಣಿ ಹೊಂದುವ ಮೂಲಕ ಲಾಭದತ್ತ ಮುನ್ನುಗ್ಗುತ್ತಿದೆ. ಸಂಘವು ನೌಕರರ ಅಗತ್ಯತೆ ಪೂರೈಸುತ್ತಾ ಬಂದಿವೆ. ಸಹಕಾರಿ ಕ್ಷೇತ್ರ ಇನ್ನಷ್ಟು ಬಲಿಷ್ಠವಾಗಿ ಬೆಳೆಯಬೇಕು. ದೇಶದ ಆರ್ಥಿಕ ರಂಗಕ್ಕೆ ಸಹಕಾರಿ ಬ್ಯಾಂಕ್ಗಳ ಕೊಡುಗೆ ಅನನ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ‘ಸಮನ್ವಯ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಹಲವು ಕೆಲಸ ಕಾರ್ಯಗಳಿಗೆ ಸಹಕಾರಿ ಕ್ಷೇತ್ರ ಕೊಡುಗೆ ನೀಡುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಸಂಘಟನೆ, ಬ್ಯಾಂಕ್ಗಳು ಬಡವರ ಕಣ್ಣೀರನ್ನು ಒರೆಸುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ನೀಡಲು ವ್ಯಕ್ತಿಯ ಮುಖ ನೋಡುತ್ತವೆ. ಆದರೆ ಸಹಕಾರಿ ಬ್ಯಾಂಕ್ಗಳು ಜನಪರವಾಗಿವೆ. ಈ ಮೂಲಕ ನೇರವಾಗಿ ಜನಸಾಮಾನ್ಯರನ್ನು ತಲುಪುತ್ತಿರುವುದೇ ಸಹಕಾರಿ ಬ್ಯಾಂಕ್ಗಳ ಯಶಸ್ಸಿಗೆ ಕಾರಣವಾಗಿದೆ. ರೈತರು, ಕಾರ್ಮಿಕರಿಗೆ ಸಹಕಾರಿ ಕ್ಷೇತ್ರ ಬೆಂಬಲ ನೀಡುತ್ತಾ ಸಹಕಾರ ತೋರುತ್ತಿದೆ. ಲಾಭವನ್ನೇ ನೋಡಿಕೊಂಡು ಠೇವಣಿ ಇಡುತ್ತಾರೆ. ವಿಶ್ವಾಸಾರ್ಹ ಅಧ್ಯಕ್ಷರು, ನಿರ್ದೇಶಕರು ಇರುವಾಗ ಬ್ಯಾಂಕ್ಗಳು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗುತ್ತಿವೆ ಎಂದರು.
ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಸುಧಾಕರ್ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಸಹಕಾರಿ ನೌಕರರ ಸಹಕಾರ ಸಂಘದಿಂದ ಎಸ್ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ. ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಭಾಸ್ಕರ್ ಎನ್. ಕೋಟ್ಯಾನ್, ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಲೀಲಾವತಿ ಪ್ರಕಾಶ್, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ನಾರಾಯಣ, ಎಸ್ಸಿಡಿಸಿಸಿಯ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ಜಗದೀಶ್ ಚಂದ್ರ ಅಂಚನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಪೂಜಾರಿ, ನಿರ್ದೇಶಕರಾದ ಪುಷ್ಪರಾಜ್ ಎಂ.ಎಸ್., ಕೃಷ್ಣ ಪ್ರಕಾಶ್ ಎಚ್., ರಾಜೀವ್ ಶೆಟ್ಟಿ, ದಿವಾಕರ ಶೆಟ್ಟಿ, ಶುಭಲಕ್ಷ್ಮೀ ವಿ. ರೈ, ರಾಘವ್ ಆರ್. ಉಚ್ಚಿಲ್, ಅರವಿಂದ ಕೆ. ಶೆಟ್ಟಿ, ಅನಂತರಾಮ್ ಎಂ. ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಲ್ಪಾ ವೆಂಕಟೇಶ್ ಪ್ರಾರ್ಥಿಸಿದರು. ದ.ಕ. ಸಹಕಾರಿ ನೌಕರರ ಸಹಕಾರ ಸಂಘದ ಉಪಾಧ್ಯಕ್ಷ ಎಸ್. ಜಗದೀಶ್ ಚಂದ್ರ ಅಂಚನ್ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಲತಾ ಶಶಿಧರ್ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶಿಸಲಾಯಿತು.







