“ನಿಮ್ಮನ್ನು ನಿರ್ಮಲಾ ಬದಲು ‘ನಿರ್ಬಲ’ ಎಂದು ಕರೆಯಬೇಕೆನಿಸುತ್ತದೆ”
ವಿತ್ತ ಸಚಿವೆಯನ್ನು ಟೀಕಿಸಿದ ಅಧೀರ್ ರಂಜನ್ ಚೌಧುರಿ
ಹೊಸದಿಲ್ಲಿ, ಡಿ.2: ಲೋಕಸಭೆಯಲ್ಲಿ ಇಂದು ಚರ್ಚೆಯ ನಡುವೆ ಕಾಂಗ್ರೆಸ್ ನಾಯಕ್ ಅಧೀರ್ ರಂಜನ್ ಚೌಧುರಿ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ‘ನಿರ್ಬಲ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
‘‘ನಿಮ್ಮನ್ನು ನಾನು ಗೌರವಿಸುತ್ತೇನಾದರೂ ಸಚಿವೆಯಾಗಿದ್ದುಕೊಂಡು ಸರಕಾರದ ನೀತಿಗಳನ್ನು ಪ್ರತಿಪಾದಿಸಲು ನಿಮಗೆ ಸಾಧ್ಯವಿಲ್ಲದೇ ಇರುವುದರಿಂದ ಕೆಲವೊಮ್ಮೆ ನಿಮ್ಮನ್ನು ನಿರ್ಮಲಾ ಬದಲು ‘ನಿರ್ಬಲ’ ಎಂದು ಕರೆಯಬೇಕೆಂದೆನಿಸುತ್ತದೆ’’ ಎಂದು ಚೌಧುರಿ ಅಂದು ಬಿಟ್ಟರು.
ಕಾರ್ಪೊರೇಟ್ ತೆರಿಗೆ ಇಳಿಕೆ ಕುರಿತಾದ ಚರ್ಚೆಯಲ್ಲಿ ವಿತ್ತ ಸಚಿವೆ ಪ್ರತಿಕ್ರಿಯೆಗೆ ಕಾಂಗ್ರೆಸ್ ನಾಯಕ ಮೇಲಿನಂತೆ ಹೇಳಿದರು.
ಕಾರ್ಪೊರೇಟ್ ತೆರಿಗೆ ಕಡಿತಗೊಳಿಸುವ ಸರಕಾರದ ಕ್ರಮ ಸಕಾರಾತ್ಮಕ ಪರಿಣಾಮ ಬೀರಿದೆ, ಅಮೆರಿಕದ ಜತೆಗಿನ ವ್ಯಾಪಾರ ಯುದ್ಧದಿಂದಾಗಿ ಕಂಪೆನಿಗಳು ಚೀನಾದಿಂದ ಹೊರ ಹೋಗಲು ಬಯಸುತ್ತಿವೆ ಎಂದು ಸಚಿವೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಗುಜರಾತ್ನಿಂದ ದಿಲ್ಲಿಗೆ ಬಂದ ವಲಸಿಗರು ಎಂದು ಅಧೀರ್ ರಂಜನ್ ಚೌಧುರಿ ಹೇಳಿರುವುದೂ ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.