ಕಾಸರಗೋಡು : ದೊಣ್ಣೆಯಿಂದ ಹೊಡೆದು ಪತ್ನಿಯ ಹತ್ಯೆ
ಕಾಸರಗೋಡು : ದೊಣ್ಣೆಯಿಂದ ಬಡಿದು ತನ್ನ ಪತ್ನಿಯನ್ನು ಕೊಲೆಗೈದ ಘಟನೆ ಸೋಮವಾರ ಸಂಜೆ ಅಂಬಲತ್ತರದ ಇರಿಯದಲ್ಲಿ ನಡೆದಿದ್ದು, ತಡೆಯಲು ಬಂದ ಪುತ್ರಿ ಮೇಲೂ ಹಲ್ಲೆ ನಡೆಸಲಾಗಿದೆ.
ಇರಿಯದ ಕಲ್ಯಾಣಿ (50) ಮೃತರು ಎಂದು ಗುರುತಿಸಲಾಗಿದೆ.
ಗೋಪಾಲಕೃಷ್ಣ (60) ಕೃತ್ಯದ ಆರೋಪಿ ಎಂದು ತಿಳಿದುಬಂದಿದ್ದು, ಅವರ ಪುತ್ರಿ ಶರಣ್ಯ (25) ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಮನೆಯಲ್ಲಿ ಜಗಳವಾಗಿದ್ದು, ಮರದ ತುಂಡಿನಿಂದ ಗೋಪಾಲಕೃಷ್ಣ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದು, ಬೊಬ್ಬೆ ಕೇಳಿ ತಡೆಯಲು ಬಂದ ಪುತ್ರಿ ಶರಣ್ಯ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದ್ದು, ಗಂಭೀರ ಗಾಯಗೊಂಡ ಕಲ್ಯಾಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯಂತೆ ಅಂಬಲತ್ತರ ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಆರೋಪಿ ಗೋಪಾಲಕೃಷ್ಣ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೌಟಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.