ಉಡುಪಿ: ಶ್ರೀಕೃಷ್ಣ ಮಠದಲ್ಲಿ 2ನೇ ವರ್ಷವೂ ನಡೆಯದ ಎಡೆಸ್ನಾನ
ಉಡುಪಿ, ಡಿ.2: ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಸೋಮವಾರ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರ ಗುಡಿಯ ಆವರಣದಲ್ಲಿ ಸತತ ಎರಡನೇ ವರ್ಷವೂ ಮಡೆಸ್ನಾನದಂತೆ ಎಡೆಸ್ನಾನಕ್ಕೂ ಅವಕಾಶ ಸಿಗಲಿಲ್ಲ. ಭಕ್ತರು ವಿಶೇಷ ಪೂಜೆ ಸಲ್ಲಿಸಿ ಅನ್ನಪ್ರಸಾದ ಸ್ವೀಕರಿಸಿ ತೆರಳಿದರು.
ಪರ್ಯಾಯ ಪಲಿಮಾರು ಮಠಾಧೀಶರು ತಾನು ಪರ್ಯಾಯ ಪೀಠವೇರಿದ ಬಳಿಕ ತೆಗೆದುಕೊಂಡ ದಿಟ್ಟ ನಿರ್ಧಾರದಲ್ಲಿ ಶ್ರೀಕೃಷ್ಣ ಮಠದಲ್ಲಿ ಈ ಮೊದಲು ನಡೆಯುತಿದ್ದ ಮಡೆ ಸ್ನಾನ ಹಾಗೂ ಪೇಜಾವರ ಶ್ರೀಗಳು ತನ್ನ ಎರಡು ವರ್ಷಗಳ ಪರ್ಯಾಯ ಸಂದರ್ಭದಲ್ಲಿ ಪ್ರಾರಂಭಿಸಿದ ಎಡೆ ಸ್ನಾನಕ್ಕೂ ತಿಲಾಂಜಲಿ ಇಟ್ಟಿದ್ದರು. ಇದರಿಂದ ಶ್ರೀಕೃಷ್ಣಮಠದಲ್ಲಿ ಸತತ ಎರಡನೇ ಬಾರಿಗೆ ಮಡೆಸ್ನಾನ ಹಾಗೂ ಎಡೆಸ್ನಾನ ಎರಡೂ ವಿದಾಯ ಹೇಳಿದಂತಾಗಿದೆ.
ಕೆಲವರ್ಷಗಳ ಹಿಂದಿನವರೆಗೆ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಹರಕೆ ಹೊತ್ತ ಭಕ್ತರಿಂದ ಮಡೆಸ್ನಾನ ನಡೆಯುತ್ತಿತ್ತು. ಆದರೆ ಸುಬ್ರಹ್ಮಣ್ಯದಲ್ಲಿ ಇದು ವಿವಾದವಾದ ಬಳಿಕ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ತಮ್ಮ ಎರಡು ವರ್ಷಗಳ ಪರ್ಯಾಯಾವಧಿಯಲ್ಲಿ (2016-17) ಮಡೆಸ್ನಾನವನ್ನು ನಿಲ್ಲಿಸಿ ಎಡೆಸ್ನಾನಕ್ಕೆ ಅವಕಾಶ ನೀಡಿದ್ದರು.
ಅನಗತ್ಯ ವಿವಾದ ಬೇಡ: ಆದರೆ 2018ರಲ್ಲಿ ವರ್ಷ ಪರ್ಯಾಯ ಪೀಠವೇರಿದ ಪಲಿಮಾರುಶ್ರೀಗಳು ಅನಗತ್ಯ ವಿವಾದಕ್ಕೆ ಆಸ್ಪದ ನೀಡದಂತೆ ಎಡೆಸ್ನಾನಕ್ಕೂ ಅವಕಾಶ ನೀಡದಿರಲು ನಿರ್ಧರಿಸಿದ್ದರು.
‘ಅನಗತ್ಯ ವಿವಾದ ಬೇಡವೆಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ಮಡೆಸ್ನಾನ ಮತ್ತು ಎಡೆಸ್ನಾನ ಎರಡರಲ್ಲೂ ವಿವಾದಗಳಿವೆ. ತಿನ್ನುವ ಅನ್ನದ ಮೇಲೆ ಉರುಳು ಸೇವೆ ಮಾಡುವುದು ಕೆಲವರಿಗೆ ಇಷ್ಟವಿಲ್ಲ. ಹೀಗಾಗಿ ವಿವಾದ ಬೇಡ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ದೇವರ ಸೇವೆ, ಪೂಜೆ ಯಷ್ಟೇ ಮುಖ್ಯ.’ಎಂದು ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ನುಡಿದರು.
ಮುಚ್ಲುಗೋಡಿನಲ್ಲಿ ಎಡೆಸ್ನಾನ: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಮುಚ್ಲುಗೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ಐದು ವರ್ಷಗಳಿಂದ ನಡೆದುಕೊಂಡು ಬಂದ ಎಡೆಸ್ನಾನ ಪದ್ದತಿ ಈ ಬಾರಿಯು ಮುಂದುವರಿಯಿತು. ಈ ಬಾರಿ 9 ಮಂದಿ ಭಕ್ತರು ದೇವರ ಗಭಗುಡಿಯ ಸುತ್ತಲೂ ಬಾಳೆ ಎಲೆಯಲ್ಲಿ ಬಡಿಸಿದ ನೈವೇದ್ಯದ ಮೇಲೆ ಉರುಳುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.
ಮಡೆ ಸ್ನಾನ ವಿವಾದ ರೂಪ ತಾಳಿ ನ್ಯಾಯಾಲಯದ ಮೆಟ್ಟಲೇರುವ ಮುನ್ನ ಇಲ್ಲೂ ಮಡೆ ಸ್ನಾನ ನಡೆಯುತ್ತಿತ್ತು. ಬಳಿಕ ಪೇಜಾವರಶ್ರೀಗಳು ತೆಗೆದುಕೊಂಡ ನಿರ್ಧಾರದಂತೆ ಕಳೆದ ಐದು ವರ್ಷಗಳಿಂದ ಇಲ್ಲಿ ಮಡೆ ಸ್ನಾನವನ್ನು ನಿಲ್ಲಿಸಿ ಕೇವಲ ಎಡೆಸ್ನಾನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ.