'ನಮಗೆ ಮುಜುಗರವಾಗುತ್ತಿದೆ': ನಿರ್ಮಲಾ ಸೀತಾರಾಮನ್ ಗೆ 6 ರಾಜ್ಯಗಳ ವಿತ್ತ ಸಚಿವರ ಹೇಳಿಕೆ
ಹೊಸದಿಲ್ಲಿ: "ಇಲ್ಲಿಗೆ ಬಂದು ಹಣ ಕೇಳುವುದು ಮುಜುಗರಕಾರಿ'' ಎಂದು ಆರು ರಾಜ್ಯಗಳ ವಿತ್ತ ಸಚಿವರು ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಹೇಳಿದ್ದಾರೆ.
2017ರಲ್ಲಿ ಜಿಎಸ್ ಟಿ ಜಾರಿಯಿಂದಾಗಿ ಉಂಟಾದ ನಷ್ಟಗಳಿಗೆ ಪರಿಹಾರ ಮೊತ್ತ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ಆಗಿರುವ ವಿಳಂಬದ ಕುರಿತಂತೆ ಇಂದು ಕೇರಳ, ಪಂಜಾಬ್, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಢ ಹಾಗೂ ದಿಲ್ಲಿಯ ವಿತ್ತ ಸಚಿವರುಗಳು ಕೇಂದ್ರ ಸಚಿವೆಯನ್ನು ಭೇಟಿಯಾಗಿದ್ದಾರೆ.
"ಪರಿಹಾರ ಕುರಿತಂತೆ ಕೇಂದ್ರ ವಿತ್ತ ಸಚಿವೆಯ ಜತೆ ರಾಜ್ಯಗಳಿಗೆ ಆಗಸ್ಟ್-ಸೆಪ್ಟಂಬರ್ ತಿಂಗಳ ಪರಿಹಾರ ಕುರಿತಂತೆ ಮುಕ್ತ ಚರ್ಚೆ ನಡೆಸಿದ್ದೇವೆ. ಮುಂದಿನ ಎರಡು ತಿಂಗಳ ಪರಿಹಾರ ಕೂಡ ಇದೆ. ನಾವು ಸಮಸ್ಯೆ ಎದುರಿಸುತ್ತಿದ್ದೇವೆ. ನಮಗೆ ಜೈಲುಗಳು, ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ಬಂದ್ ಮಾಡಲು ಸಾಧ್ಯವಿಲ್ಲ, ನಾವು ಪಿಂಚಣಿ ನೀಡಬೇಕಿದೆ, ರಾಜ್ಯಗಳಿಗೆ ಹಲವು ಜವಾಬ್ದಾರಿಗಳಿವೆ,'' ಎಂದು ಪಂಜಾಬ್ ವಿತ್ತ ಸಚಿವ ಮನ್ಪೀತ್ ಸಿಂಗ್ ಬಾದಲ್ ಹೇಳಿದರು.
``ನಾವು ಪ್ರತಿ ದಿನ ದಿಲ್ಲಿಗೆ ಬರಲು ಸಾಧ್ಯವಿಲ್ಲ. ಒಳ್ಳೆಯದಾಗುವುದಿಲ್ಲ ಹಾಗೂ ಮುಜುಗರವಾಗುತ್ತಿದೆ. ಹಣ ಕೇಳುವವರನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ,'' ಎಂದು ಹೇಳಿದ ಅವರು ಸಚಿವೆ ಆದಷ್ಟು ಬೇಗ ಹಣ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆಂದರು.