ಪೊಲೀಸರೊಂದಿಗೆ ಘರ್ಷಣೆ: 60ಕ್ಕೂ ಹೆಚ್ಚು ಹಿಂಜಾವೇ ಕಾರ್ಯಕರ್ತರ ಸೆರೆ
ಕೋಲ್ಕತಾ,ಡಿ.4: ತಮ್ಮ ರ್ಯಾಲಿಗೆ ತಡೆಯೊಡ್ಡಿದ ಪೊಲೀಸರೊಂದಿಗೆ ಹಿಂದೂ ಜಾಗರಣ ವೇದಿಕೆ (ಹಿಂಜಾವೇ)ಯ ಕಾರ್ಯಕರ್ತರು ಘರ್ಷಣೆಗಿಳಿದ ಘಟನೆ ಮಂಗಳವಾರ ಇಲ್ಲಿಯ ಸಿಯಾಲ್ಡಾದಲ್ಲಿ ನಡೆದಿದೆ. 60ಕ್ಕೂ ಅಧಿಕ ಹಿಂಜಾವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ತಡೆಯನ್ನು ಉಲ್ಲಂಘಿಸಿ ಜಾಥಾವನ್ನು ಮುಂದಕ್ಕೆ ಒಯ್ಯಲು ಪ್ರಯತ್ನಿಸಿದ್ದ ನೂರಾರು ಹಿಂಜಾವೇ ಕಾರ್ಯಕರ್ತರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದರು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಬಿಜೆಪಿ ಸಂಸದ ಅನುಪಮ ಹಝ್ರಿ ಅವರೂ ಗಾಯಗೊಂಡಿದ್ದಾರೆ.
ನಗರದಲ್ಲಿ ಸಂಘ ಪರಿವಾರದ ಸದಸ್ಯರ ಮೇಲೆ ದಾಳಿ ಘಟನೆಗಳನ್ನು ಪ್ರತಿಭಟಿಸಿ ಹಿಂಜಾವೇ ಸಿಯಾಲ್ಡಾದಿಂದ ಎಸ್ಪ್ಲನೇಡ್ವರೆಗೆ ಜಾಥಾದಲ್ಲಿ ತೆರಳಲು ಮುಂದಾಗಿತ್ತು.
Next Story