1984ರ ಸಿಕ್ಖ್ ವಿರೋಧಿ ಹಿಂಸಾಚಾರ: ಮನಮೋಹನ್ ಸಿಂಗ್ ಹೇಳಿದ್ದೇನು?
ಹೊಸದಿಲ್ಲಿ, ಡಿ.5: ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರ ಸಲಹೆಯಂತೆ ಗಲಭೆ ನಿಯಂತ್ರಿಸಲು ತಕ್ಷಣವೇ ಸೇನೆಯನ್ನು ಕರೆಸಿದ್ದರೆ ಇಂದಿರಾ ಗಾಂಧಿಯವರ ಹತ್ಯೆ ಬಳಿಕ 1984ರಲ್ಲಿ ನಡೆದ ಸಿಕ್ಖ್ ವಿರೋಧಿ ಹಿಂಸಾಚಾರವನ್ನು ತಡೆಯಬಹುದಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಗುಜ್ರಾಲ್ ಅವರ 100ನೇ ಹುಟ್ಟುಹಬ್ಬದ ಸಂಬಂಧ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
"1984ರ ಆ ಖೇದಕರ ಘಟನೆ ಸಂಭವಿಸಿದಾಗ, ಆ ಸಂಜೆ ಗುಜ್ರಾಲ್ ಅವರು ಗೃಹಸಚಿವ ಪಿ.ವಿ.ನರಸಿಂಹ ರಾವ್ ಬಳಿಗೆ ಹೋಗಿ, ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಹೇಳಿದ್ದರು. ಜತೆಗೆ ಸರ್ಕಾರ ತಕ್ಷಣವೇ ಸೇನೆಯನ್ನು ಕರೆಸುವ ಸಂಬಂಧ ಸಲಹೆ ನೀಡಿದ್ದರು. ಈ ಸಲಹೆಯನ್ನು ಪಾಲಿಸಿದ್ದರೆ, 1984ರ ಹತ್ಯಾಕಾಂಡವನ್ನು ತಡೆಯಬಹುದಿತ್ತು ಎಂದು ಹೇಳಿದರು.
ತಾವು ಹಾಗೂ ಗುಜ್ರಾಲ್ ಇಬ್ಬರೂ ಒಂದೇ ಪರಂಪರೆಗೆ ಸೇರಿದವರಾಗಿದ್ದು, ಪಾಕಿಸ್ತಾನಿ ನಿರಾಶ್ರಿತರಾಗಿ ಭಾರತದ ಪ್ರಧಾನಿಗಳಾದೆವು ಎಂದು ಸಿಂಗ್ ಬಣ್ಣಿಸಿದರು. ಪಾಕಿಸ್ತಾನದ ಜೇಲಂ ಜಿಲ್ಲೆಯಲ್ಲಿ ಹುಟ್ಟಿದ ಇಬ್ಬರಿಗೂ ನಮ್ಮ ಸುದೀರ್ಘ ಪಯಣದಲ್ಲಿ ಈ ಅಂಶ ನಮ್ಮನ್ನು ಬೆಸೆಯುವ ಬಂಧವಾಗಿತ್ತು ಎಂದು ನೆನಪಿಸಿಕೊಂಡರು.