ಕುಂಬಳೆ ಸುಂದರ ರಾವ್ಗೆ ‘ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ’
ಮಂಗಳೂರು, ಡಿ.5: ಹಿರಿಯ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬಳೆ ಸುಂದರ ರಾವ್ 2019-20ನೇ ಸಾಲಿನ ‘ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಿ.ಬೋಳಾರ ನಾರಾಯಣ ಶೆಟ್ಟಿ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ 6 ದಶಕಗಳ ಕಾಲ ಮೇರು ಕಲಾವಿದರಾಗಿದ್ದರು. ಅವರ ಸ್ಮರಣೆಗಾಗಿ ಅವರ ಪುತ್ರ ಬೋಳಾರ ಕರುಣಾಕರ ಶೆಟ್ಟಿಯ ನೇತೃತ್ವದಲ್ಲಿ 2009ರಲ್ಲಿ ಸ್ಥಾಪನೆಗೊಂಡ ‘ದಿ ಬೋಳಾರ ನಾರಾಯಣ ಶೆಟ್ಟಿ ಸ್ಮಾರಕ ಯಕ್ಷ ಪ್ರತಿಷ್ಠಾನ’ ಈವರೆಗೆ 18 ಮಂದಿ ಕಲಾವಿದರಿಗೆ ಪ್ರಶಸ್ತಿ ನೀಡಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಡಿ.7ರಂದು ಬೆಳಗ್ಗೆ 11ಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಲಿದ್ದು, ಗುರುದೇವಾನಂದ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ದಿ.ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷ ಬೋಳಾರ ಕರುಣಾಕರ ಶೆಟ್ಟಿ, ವಿಶ್ವಸ್ಥ ಮಂಡಳಿಯ ಸಸ್ಯರಾದ ವಾಸುದೇವ ಆರ್.ಕೊಟ್ಟಾರಿ, ಗೋಪಾಲ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.