ಸುಟ್ಟು ಹಾಕುವ ಬೆದರಿಕೆ: ಕಾಂಗ್ರೆಸ್ ಶಾಸಕನ ವಿರುದ್ಧ ಪ್ರಜ್ಞಾ ಸಿಂಗ್ ದೂರು
ಭೋಪಾಲ, ಡಿ.8: ಕಾಂಗ್ರೆಸ್ ಶಾಸಕ ಗೋವರ್ಧನ ಡಾಂಗಿ ಮಧ್ಯಪ್ರದೇಶಕ್ಕೆ ಬಂದರೆ ತನ್ನನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಒಡ್ಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.
ಶನಿವಾರ ರಾತ್ರಿ ಭೋಪಾಲದ ಕಮಲಾ ನೆಹರೂ ಠಾಣೆಗೆ ಆಗಮಿಸಿದ ಪ್ರಜ್ಞಾ ಸಿಂಗ್ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆ ಓರ್ವ ದೇಶಭಕ್ತ ಎಂಬ ಹೇಳಿಕೆ ನೀಡಿದ್ದ ಪ್ರಜ್ಞಾ ಸಿಂಗ್ ವಿರುದ್ಧ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿತ್ತು. ಪ್ರಜ್ಞಾ ಸಿಂಗ್ ಹೇಳಿಕೆಯನ್ನು ಖಂಡಿಸಿ ಮಧ್ಯಪ್ರದೇಶದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪ್ರಜ್ಞಾ ಸಿಂಗ್ ಪ್ರತಿಕೃತಿಯನ್ನು ದಹಿಸಲಾಗಿತ್ತು. ಆ ಸಂದರ್ಭ ಮಾತನಾಡಿದ್ದ ಮಧ್ಯಪ್ರದೇಶದ ಶಾಸಕ ಗೋವರ್ಧನ ಡಾಂಗಿ, ಈಗ ನಾವು ಪ್ರಜ್ಞಾ ಸಿಂಗ್ ಪ್ರತಿಕೃತಿ ಸುಡುತ್ತಿದ್ದೇವೆ. ಒಂದು ವೇಳೆ ಅವರು ಇಲ್ಲಿಗೆ ಬಂದರೆ ಅವರನ್ನು ಕೂಡಾ ಸುಟ್ಟು ಹಾಕುತ್ತೇವೆ ಎಂದಿದ್ದರು.
ಬಳಿಕ ತನ್ನ ಹೇಳಿಕೆಗೆ ಶಾಸಕ ಡಾಂಗಿ ಕ್ಷಮೆ ಯಾಚಿಸಿದ್ದರು. ಪ್ರಕರಣದ ಬಗ್ಗೆ ಪ್ರಜ್ಞಾ ಸಿಂಗ್ ಜೊತೆ ಮಾತನಾಡುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂಜಯ್ ಸಾಹು ಹೇಳಿದ್ದಾರೆ.