ದಿಲ್ಲಿ ಬೆಂಕಿ ಅವಘಡ: ಸಾಯುವ ಮುನ್ನ ಗೆಳೆಯನಿಗೆ ಬಂತು ಕೊನೆಯ ಕರೆ...
ಕೊನೆಯುಸಿರೆಳೆದ ಮುಶರ್ರಫ್ ಅಲಿ ಹೇಳಿದ್ದೇನು ?
ಹೊಸದಿಲ್ಲಿ, ಡಿ.8: ರಾಣಿ ಝಾನ್ಸಿ ರಸ್ತೆಯ ಅನಾಝ್ ಮಂಡಿಯ ಕಾರ್ಖಾನೆಯಲ್ಲಿ ರವಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ 43 ಮಂದಿಯಲ್ಲಿ ಓರ್ವನಾದ ಮುಶರ್ರಫ್ ಅಲಿ (34) ಸಾವನ್ನಪ್ಪುವ ಕೆಲವೇ ಕ್ಷಣಗಳ ಮುನ್ನ ಉತ್ತರಪ್ರದೇಶದ ಬಿಜನೂರಿನಲ್ಲಿರುವ ಗೆಳೆಯ ಮೋನು ಅಗರ್ವಾಲ್ಗೆ ಫೋನ್ ಮಾಡಿ ತನ್ನ ಕುಟುಂಬ ಹಾಗೂ ಮಕ್ಕಳನ್ನು ನೋಡಿಕೊಳ್ಳುವಂತೆ ವಿನಂತಿಸಿದ್ದಾರೆ.
‘‘ನನ್ನ ಕುಟುಂಬವನ್ನು ನೋಡಿಕೊ. ದಿಲ್ಲಿಯ ಬೆಂಕಿಯಲ್ಲಿ ಸಿಲುಕಿರುವ ನಾನು ಬದುಕಿ ಉಳಿಯುವ ಸಾಧ್ಯತೆ ಇಲ್ಲ’’ ಎಂದು ಮುಹಮ್ಮದ್ ಮುಶರ್ರಫ್ ಮುಂಜಾನೆ 5 ಗಂಟೆಗೆ ಫೋನ್ ಮೂಲಕ ಗೆಳೆಯ ಮೋನು ಅಗರ್ವಾಲ್ಗೆ ತಿಳಿಸಿದ್ದಾರೆ. ಉತ್ತರಪ್ರದೇಶದ ಟೆಂಡ್ಮೆಡಾಸ್ ನೆರೆಯವರಾದ ಇವರಿಬ್ಬರು ಬಾಲ್ಯದಿಂದಲೇ ಸ್ನೇಹಿತರು ಮುಶರ್ರಫ್ ಕರೆ ಮಾಡಿದ ಸಂದರ್ಭ ಮೋನು ಅಗರ್ವಾಲ್ ಭರವಸೆ ಕಳೆದುಕೊಳ್ಳಬೇಡ. ಕಟ್ಟಡದಿಂದ ಕೆಳಗೆ ಹಾರು. ಯಾರಾದರೂ ನೆರವು ನೀಡಬಹುದು ಎಂದು ಸಲಹೆ ನೀಡಿದ್ದಾರೆ. ನೆರವು ಸಿಕ್ಕಿತ್ತು. ಆದರೆ, ಅದಾಗಲೇ ಮುಷರಫ್ ಸಾವನ್ನಪ್ಪಿದ್ದರು.
ಈ ಬಗ್ಗೆ ಮಾದ್ಯಮದೊಂದಿಗೆ ಮಾತನಾಡಿದ ಮೋನು ಅಗರ್ವಾಲ್, ನಾನು ನನ್ನ ಸಹೋದರನನ್ನು ಕಳೆದುಕೊಂಡಿದ್ದೇನೆ. ಆತನ ಕುಟುಂಬಕ್ಕೆ ಸಹಾಯ ನೀಡಲು ನಾನು ಬದುಕಬೇಕಿದೆ. ಇಂದು ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನನ್ನ ಆತ್ಮೀಯ ಗೆಳೆಯ ಎಂದಿಗೂ ಸಿಗಲಾರ ಎಂದಿದ್ದಾರೆ.