ಜಿ.ಟಿ.ದೇವೇಗೌಡರ ಕುಟುಂಬ ಮಂಜುನಾಥ್ ಪರ ಕೆಲಸ ಮಾಡಿದ್ದರಿಂದ ಎಚ್.ವಿಶ್ವನಾಥ್ ಗೆ ಸೋಲು: ಎಂ. ಶಿವಣ್ಣ
ಕೋಟೆ ಶಿವಣ್ಣ
ಮೈಸೂರು: ಶಾಸಕ ಜಿ.ಟಿ.ದೇವೇಗೌಡರ ಕುಟುಂಬ ಸಂಪೂರ್ಣವಾಗಿ ಕಾಂಗ್ರೆಸ್ ನ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಪರ ಕೆಲಸ ಮಾಡಿದ್ದರಿಂದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅವರಿಗೆ ಸೋಲುಂಟಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಬೇಸರ ವ್ಯಕ್ತಪಡಿಸಿದರು.
'ವಾರ್ತಾಭಾರತಿ'ಯೊಂದಿಗೆ ಸೋಮವಾರ ದೂರವಾಣಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಸರ್ಕಾರ ತೆಗೆಯಲು ಪ್ರಮುಖರಾಗಿದ್ದ ಎಚ್.ವಿಶ್ವನಾಥ್ ಅವರನ್ನು ಸೋಲಿಸಲೇಬೇಕು ಎಂದು ನಿರ್ಧರಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಜೆಡಿಎಸ್ ನಿಂದ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಡೆಗಳಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದರು. ಜೊತೆಗೆ ಹುಣಸೂರಿನಲ್ಲಿ ಪ್ರಭಾವ ಇಟ್ಟುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಕುಟುಂಬ ತಟಸ್ಥವಾಗಿರುತ್ತೇವೆ ಎಂದು ಹೇಳಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದರು. ಹಾಗಾಗಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಸೋಲಬೇಕಾಯಿತು ಎಂದು ಹೇಳಿದರು.
ಹುಣಸೂರು ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಶ್ರೀರಾಮುಲು, ಶಾಸಕ ಅಪ್ಪಚ್ಚುರಂಜನ್, ಸಂಸದ ಪ್ರತಾಪ್ ಸಿಂಹ ವಿಶ್ವನಾಥ್ ಗೆಲುವಿಗೆ ಶ್ರಮ ಪಟ್ಟರು ಆದರೆ ಮತದಾರರ ತೀರ್ಮಾನಕ್ಕೆ ನಾವು ತಲೆಬಾಗಲೇಬೇಕು ಎಂದು ಹೇಳಿದರು.