ನೇತ್ರಾವತಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲು ಮನವಿ
ಉಪ್ಪಿನಂಗಡಿ : ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆಂಪಿಮಜಲುವಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಹಾಗೂ ನೇತ್ರಾವತಿ ನದಿ ಬದಿಗೆ ತಡೆಗೋಡೆ ರಚನೆಗೆ ಅನುದಾನ ಒದಗಿಸಬೇಕೆಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವದ್ಧಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಉಪ್ಪಿನಂಗಡಿ ಗ್ರಾ.ಪಂ. ವತಿಯಿಂದ ಮನವಿ ನೀಡಲಾಗಿದೆ.
ಕಾರ್ಯಕ್ರಮ ನಿಮಿತ್ತ ಪುತ್ತೂರಿಗೆ ಆಗಮಿಸಿದ ಸಚಿವರಿಗೆ ಮನವಿ ನೀಡಿದ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ನೇತತ್ವದ ನಿಯೋಗ, ಬೇಸಿಗೆಯಲ್ಲಿ ನೇತ್ರಾವತಿ ನದಿಯು ನೀರಿಲ್ಲದೆ ಬತ್ತಿ ಹೋಗುತ್ತದೆ. ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆಯುಂಟಾಗುತ್ತಿದ್ದು, ಆದ್ದರಿಂದ ಉಪ್ಪಿನಂಗಡಿಯ ಕೆಂಪಿ ಮಜಲು ಬಳಿ ನೇತ್ರಾವತಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲು ಅನುದಾನ ಒದಗಿಸಬೇಕು ಹಾಗೂ ಮಳೆಗಾಲದಲ್ಲಿ ನೇತ್ರಾವತಿಯ ನದಿ ಬದಿಯು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದು, ಆದ್ದರಿಂದ ಉಪ್ಪಿನಂಗಡಿಯ ಸಮುದಾಯ ಆಸ್ಪತ್ರೆಯಿಂದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದವರೆಗೆ ತಡೆಗೋಡೆಯನ್ನು ನಿರ್ಮಿಸಲು ಅನುದಾನ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಯು.ಟಿ. ತೌಸೀಫ್, ಯು.ಕೆ. ಇಬ್ರಾಹೀಂ ಇದ್ದರು.