ಶಿಕ್ಷಣದಿಂದ ಮಾತ್ರ ವಿಕಲಚೇತನರ ಅಭಿವೃದ್ಧಿ ಸಾಧ್ಯ: ಸಚಿವ ಸುರೇಶ್ ಕುಮಾರ್
ವಿಶೇಷ ಚೇತನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಾದೇಶಿಕ ವರದಿ ಬಿಡುಗಡೆ

ಬೆಂಗಳೂರು, ಡಿ.11: ಶಿಕ್ಷಣದ ಮೂಲಕ ಮಾತ್ರ ವಿಶೇಷ ಚೇತನರ ಸರ್ವತೋಮುಖ ಅಭಿವೃದ್ದಿ ಸಾಧ್ಯವೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರ ಯುನೆಸ್ಕೋ, ಸರ್ವಶಿಕ್ಷಾ ಅಭಿಯಾನ ಮತ್ತು ಸಿಬಿಎಂ ನಗರದ ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಾದೇಶಿಕ ವರದಿ-2019 ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ವಿಶೇಷ ಚೇತನರ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದೆ ಎಂದರು.
ಪ್ರತಿಯೊಬ್ಬ ವಿಶೇಷ ಚೇತನರಿಗೂ ಶಿಕ್ಷಣ ಸಿಗುವಂತಾಗಬೇಕು. ಯಾರೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು. ವಿಶೇಷ ಚೇತನ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದ್ದು, ಎಲ್ಲ ಶಾಲೆಗಳಲ್ಲೂ ವಿಶೇಷ ಚೇತನ ಮಕ್ಕಳನ್ನು ಸಾಮಾನ್ಯ ವಿದ್ಯಾರ್ಥಿಗಳಂತೆ ಉಪಚರಿಸಬೇಕು. ಅವರನ್ನು ಪ್ರತ್ಯೇಕದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದರು.
ಅಂಗವಿಕಲರ ಅಧಿನಿಯಮದ ಆಯುಕ್ತ ವಿ.ಎಸ್.ಬಸವರಾಜು, ಯುನೆಸ್ಕೋ ನಿರ್ದೇಶಕ ಎರಿಕ್ ಫಾಲ್ಟ್, ಸಿಬಿಎಂ ಇಂಡಿಯಾ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಡಾ.ಸಾರಾ ವರ್ಗಿಸ್ ಮೊದಲಾದವರು ಉಪಸ್ಥಿತರಿದ್ದರು.
ವರದಿಯ ಪ್ರಮುಖ ಶಿಫಾರಸುಗಳು:
ವಿಶೇಷ ಚೇತನರ ಶಿಕ್ಷಣಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಪ್ರಮುಖ 10 ಶಿಫಾರಸುಗಳನ್ನು ಮಾಡಲಾಗಿದ್ದು, ವರದಿಯನ್ನು ಸಚಿವ ಸುರೇಶ್ ಕುಮಾರ್ಗೆ ಯುನೆಸ್ಕೋದಿಂದ ಒಪ್ಪಿಸಲಾಯಿತು.
-ಅಂಗವಿಕಲರ ಹಕ್ಕುಗಳ ಕಾಯ್ದೆ 2016ರೊಂದಿಗೆ ಹೊಂದಾಣಿಕೆಯಾಗುವಂತೆ ಆರ್ಟಿಇ ಕಾಯ್ದೆಯಲ್ಲಿ ಅಂಗವಿಕಲ ಮಕ್ಕಳ ನಿರ್ದಿಷ್ಟ ಕಾಳಜಿಗಳನ್ನು ಸೇರಿಸುವುದು.
-ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿ ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಇರುವ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳ ಸಮನ್ವಯ ಸಾಧಿಸಲು ಒಂದು ಸನ್ವಯ ಕಾರ್ಯತಂತ್ರ ರೂಪಿಸುವುದು.
-ಶಿಕ್ಷಣಕ್ಕಿರುವ ಆಯವ್ಯಯದಲ್ಲಿ ನ್ಯೂನತೆಯುಳ್ಳ ಮಕ್ಕಳ ಕಲಿಕೆಗೆ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಮತ್ತು ನಿರ್ದಿಷ್ಟ ಅನುದಾನ ಒದಗಿಸುವುದನ್ನು ಖಚಿತಪಡಿಸುವುದು.
-ದತ್ತಾಂಶ ವ್ಯವಸ್ಥೆಗಳನ್ನು ಬಲಪಡಿಸಿ, ಅವುಗಳನ್ನು ಸಾಮರ್ಥ್ಯವುಳ್ಳ, ವಿಶ್ವಾಸನೀಯ ಹಾಗೂ ಯೋಜನೆ, ಅನುಷ್ಠಾನ ಮತ್ತು ಪರಿವೀಕ್ಷಣೆಗೆ ಉಪಯೋಗಿಸಿಕೊಳ್ಳುವುದು.
-ನ್ಯೂನತೆಯುಳ್ಳ ಮಕ್ಕಳ ಶಿಕ್ಷಣಕ್ಕಾಗಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಬೇಕು.
-ಪ್ರತಿ ಮಗುವಿಗೂ ಅವಕಾಶ ಒದಗಿಸುವುದು ಮತ್ತು ಯಾವುದೇ ನ್ಯೂನತೆಯುಳ್ಳ ಮಗುವು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು.
-ವೈವಿಧ್ಯಮಯ ಕಲಿಕೆಗೆ ಒಳಪಡಿಸುವಿಕೆಯಿಂದ ಬೋಧನಾ ಕ್ರಮದಲ್ಲಿ ಮಾರ್ಪಾಡು ಮಾಡಬೇಕು.
-ನ್ಯೂನತೆಯುಳ್ಳ ಮಕ್ಕಳಿಗೆ ಸಂಬಂಧಿಸಿದಂತೆ ವರ್ಗ ಕೋಣೆಗಳಲ್ಲಿ ಮತ್ತು ಇತರೆಡೆಗಳಲ್ಲಿ ಧನಾತ್ಮಕ ಮನೋಧೋರಣೆಗಳನ್ನು ನಿರ್ಮಿಸಬೇಕು.
-ಸರಕಾರ, ನಾಗರಿಕ ಸಮಾಜ, ಖಾಸಗಿ ವಲಯ ಮತ್ತು ಸ್ಥಳೀಯ ಸಮುದಾಯಗಳು ಪರಿಣಾಮಕಾರಿ ಸಹಯೋಗಗಳನ್ನು ಉತ್ತೇಜಿಸಬೇಕು ಎಂದು ಶಿಫಾರಸಿನಲ್ಲಿ ತಿಳಿಸಿದೆ.







