ಪೌರತ್ವ ಕಾಯ್ದೆ ವಿರುದ್ಧ ಭಾರೀ ಪ್ರತಿಭಟನೆ: ಬಿಜೆಪಿ ಶಾಸಕನ ಮನೆಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು
ಎಜಿಪಿ ಪಕ್ಷದ ಮುಖ್ಯ ಕಚೇರಿ ಧ್ವಂಸ
ಹೊಸದಿಲ್ಲಿ: ಅಸ್ಸಾಂನಲ್ಲಿ ಪೌರತ್ವ ಮಸೂದೆ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಬಿಜೆಪಿ ಶಾಸಕ ವಿನೋದ್ ಹಝಾರಿಕಾ ಅವರ ಮನೆಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ಭಾರೀ ಹಿಂಸಾಚಾರದ ಹಿನ್ನೆಲೆಯಲ್ಲಿ ಗುವಾಹಟಿ ಪೊಲೀಸ್ ಕಮಿಷನರ್ ದೀಪಕ್ ಕುಮಾರ್ ರನ್ನು ವಜಾಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಮುನ್ನ ಪ್ರಸಾದ್ ಗುಪ್ತಾರನ್ನು ನೇಮಿಸಲಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಭಾರತಕ್ಕೆ ತನ್ನ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಅವರು ಡಿಸೆಂಬರ್ 12ರಿಂದ 14ರವರೆಗೆ ಭಾರತ ಪ್ರವಾಸದಲ್ಲಿರಬೇಕಿತ್ತು.
ಇಷ್ಟೇ ಅಲ್ಲದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಅಸ್ಸಾಮ್ ಗೊಣೊ ಪರಿಷದ್ (ಎಜಿಪಿ) ಪಕ್ಷದ ಮುಖ್ಯ ಕಚೇರಿ ಮೇಲೂ ದಾಳಿ ನಡೆದಿದೆ. ಕಟ್ಟಡದೊಳಕ್ಕೆ ನುಗ್ಗಿದ ಪ್ರತಿಭಟನಕಾರರು ಕಿಟಕಿಗಳನ್ನು ಒಡೆದು, ಸೊತ್ತುಗಳಿಗೆ ಹಾನಿಗೈದಿದ್ದಾರೆ. ಕಟ್ಟಡದ ಹೊರಗೆ ನಿಲುಗಡೆಗೊಳಿಸಲಾಗಿದ್ದ ವಾಹನಗಳು, ಪೊಲೀಸರ ವಾಹನಗಳನ್ನೂ ಧ್ವಂಸಗೈದಿದ್ದಾರೆ ಎಂದು ವರದಿಯಾಗಿದೆ.