ಪೌರತ್ವ ಮಸೂದೆ ಅಂಗೀಕಾರ ದಿಟ್ಟ ಹೆಜ್ಜೆ : ಆರೆಸ್ಸೆಸ್ ಬಣ್ಣನೆ
ನಾಗ್ಪುರ,ಡಿ.12: ಸಂಸತ್ತಿನಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯ ಅಂಗೀಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಅಭಿನಂದಿಸಿರುವ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ಜೋಶಿ ಅವರು ಇದೊಂದು ದಿಟ್ಟ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರತಿಯೊಬ್ಬರೂ ತಮ್ಮ ರಾಜಕೀಯ ಅನಿರ್ವಾಯತೆಯಿಂದ ಹೊರಗೆ ಬರಬೇಕು ಮತ್ತು ಈ ಮಸೂದೆಯನ್ನು ಸ್ವಾಗತಿಸಬೇಕು ಎಂದರು.
ಇನ್ನೊಂದು ದೇಶದಲ್ಲಿ ಧಾರ್ಮಿಕ ಕಿರುಕುಳದಿಂದಾಗಿ ಭಾರತಕ್ಕೆ ಬರುವ ಹಿಂದುವನ್ನು ನುಸುಳುಕೋರ ಎನ್ನದೆ ನಿರಾಶ್ರಿತನೆಂದು ಕರೆಯಬೇಕು ಎನ್ನುವುದು ಮೊದಲಿನಿಂದಲೂ ಆರೆಸ್ಸೆಸ್ನ ನಿಲುವಾಗಿದೆ ಎಂದ ಅವರು,1947ರಲ್ಲಿ ದೇಶವು ಇಬ್ಭಾಗಗೊಂಡಾಗ ಧಾರ್ಮಿಕ ನೆಲೆಯಲ್ಲಿ ವಿಭಜನೆಯಾಗಬೇಕು ಎಂಬ ಬೇಡಿಕೆಯಿತ್ತು. ಆದರೆ ‘ಧಾರ್ಮಿಕ ರಾಷ್ಟ್ರ ’ವನ್ನು ರೂಪಿಸುವ ಇಂತಹ ಯಾವುದೇ ಪರಿಕಲ್ಪನೆ ಭಾರತಕ್ಕೆ ಇರಲಿಲ್ಲ. ಆದರೆ ಇದೇ ವಿಷಯದಲ್ಲಿ ದೇಶವು ವಿಭಜನೆಗೊಂಡಿತ್ತು ಮತ್ತು ಆಗಿನ ನಾಯಕರು ಅದನ್ನು ಒಪ್ಪಿಕೊಂಡಿದ್ದರು ಎಂದರು.