ಮುಂಡಗೋಡ: ಟಿಬೇಟಿಯನ್ ಕ್ಯಾಂಪ್ ಗೆ ಆಗಮಿಸಿದ ದಲೈಲಾಮಾ
ಡಿ.24ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಮುಂಡಗೋಡ, ಡಿ.12: ಟಿಬೇಟಿಯನ್ ಧರ್ಮಗುರು ದಲೈಲಾಮಾ ಗುರುವಾರ 11 ಗಂಟೆಗೆ ಮುಂಡಗೋಡಕ್ಕೆ ಆಗಮಿಸಿದರು. ಈ ವೇಳೆ ವಡಗಟ್ಟಾ ಚೆಕ್ ಪೋಸ್ಟ್ ಹತ್ತಿರ ಜಿಲ್ಲಾಡಳಿತದಿಂದ ದಲೈಲಾಮರಿಗೆ ಭವ್ಯಸ್ವಾಗತ ಕೋರಲಾಯಿತು.
ಅಲ್ಲಿಂದ ಅವರು ಟಿಬೇಟ್ ಕ್ಯಾಂಪ್ ಗೆ ತೆರಳಿದರು. ದಲೈಲಾಮಾ ಸಾಗುವ ದಾರಿಯುದ್ದಕ್ಕೂ ಟಿಬೇಟಿಯನ್ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು, ಬಾಗಿ ನಮಸ್ಕರಿಸಿ ಸ್ವಾಗತ ಕೋರುತ್ತಿದ್ದ ದೃಶ್ಯ ಕಂಡುಬಂತು. ಕ್ಯಾಂಪ್ ಪ್ರವೇಶಿಸುತ್ತಿದ್ದಂತೆ ಟಿಬೇಟಿಯನ್ ಧರ್ಮಗುರುಗಳು ದಲೈಲಾಮಾ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹರೀಶಕುಮಾರ್, ಜಿಲ್ಲಾವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಶಿರಸಿ ಉಪವಿಭಾಗಧಿಕಾರಿ(ಕಂದಾಯ) ಈಶ್ವರ ಉಳ್ಳಾಗಡ್ಡಿ, ಮುಂಡಗೋಡ ತಹಶೀಲ್ದಾರ ಶ್ರೀಧರ ಮುಂದಲಮನಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
ದಲೈಲಾಮಾರ ಕಾರ್ಯಕ್ರಮಗಳು: ಡಿ.12 ರಂದು ಟಿಬೇಟ್ ಕ್ಯಾಂಪ್ಗೆ ಆಗಮಿಸಿ ಕೆಲಕಾಲ ಪೂಜೆ ಸಲ್ಲಿಸಿ ನಂತರ ವಿಶ್ರಾಂತಿ ಪಡೆಯುವರು. ದಿ.13 ರಂದು ರಷ್ಯನ್ ನ್ಯೂರೋ ವಿಜ್ಞಾನಿಗಳ ತಂಡದೊಂದಿಗೆ ಚರ್ಚೆ ಹಾಗೂ ಸಮಾಲೋಚನೆ ನಡೆಸಲಿದ್ದಾರೆ. ಡಿ.14 ರಂದು ಡ್ರೆಪುಂಗ್ ಗೋಮಾಂಗ್ ಚರ್ಚಾ ಸಭಾಂಗಣ ಉದ್ಘಾಟಿಸಲಿದ್ದಾರೆ. 15ರಿಂದ 17 ರವರೆಗೆ ಸಬಲೀಕರಣ ಕುರಿತು ವಿಸ್ತೃತ ಚರ್ಚೆ ನಡೆಸಲಿದ್ದಾರೆ. ಡಿ.19 ರಂದು ನಾಗಾರ್ಜುನ ಬೋಧನೆ ಚರ್ಚೆ, 20 ರಂದು ಜೀವನ ಚಿಂತನೆ ಮತ್ತು ಪರಂಪರೆ ಕುರಿತು ಬೋಧನೆ ನಡೆಸಲಿದ್ದಾರೆ. ಡಿ.21 ರಂದು ಬೌದ್ಧ ಧಾರ್ಮಿಕ ಗುರು ಸೊಂಗ್ಕಪಾ ಅವರ 600ನೇ ವರ್ಷಾಚರಣೆಯಲ್ಲಿ ಭಾಗವಹಿಸಲಿದ್ದು, ಡಿ.22 ರಂದು ಲಾಂಗ್ ಲೈಫ್ ಪೂಜೆ ನಡೆಸಲಿದ್ದಾರೆ. ಡಿ.24 ರಂದು ಇಲ್ಲಿಂದ ನಿರ್ಗಮಿಸಲಿದ್ದಾರೆ.