ಜಪಾನ್ ಪ್ರಧಾನಿಯ ಭಾರತ ಪ್ರವಾಸ ಮುಂದೂಡಿಕೆ?
ಪೌರತ್ವ ಮಸೂದೆ ಖಂಡಿಸಿ ಅಸ್ಸಾಂನಲ್ಲಿ ಪ್ರತಿಭಟನೆ
ಹೊಸದಿಲ್ಲಿ, ಡಿ.13: ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಯನ್ನು ಖಂಡಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರವಿವಾರದಿಂದ ಭಾರತ ಪ್ರವಾಸ ಕೈಗೊಳ್ಳಬೇಕಾಗಿದ್ದ ಜಪಾನ್ ಪ್ರಧಾನಮಂತ್ರಿ ಶಿಂರೊ ಅಬೆ ತನ್ನ ಪ್ರವಾಸವನ್ನು ಮುಂದೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಬೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಶೃಂಗ ಸಭೆಯನ್ನು ಗುವಾಹಟಿಯಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ.
ವಿವಾದಾತ್ಮಕ ಮಸೂದೆಯನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಕಾರಣ ಯೋಜನೆಯ ಪ್ರಕಾರ ಸರಕಾರವು ಡಿ.15ರಿಂದ 17ರ ತನಕ ಗುವಾಹಟಿಯಲ್ಲಿ ಭಾರತ-ಜಪಾನ್ ಶೃಂಗ ಸಭೆ ನಡೆಸುವ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಅಬೆ ನಡುವೆ ಶೃಂಗ ಸಭೆ ಡಿ.15ರಿಂದ 17ರ ತನಕ ನಡೆಯಲಿದೆ ಎಂದು ಕುಮಾರ್ ಕಳೆದ ವಾರ ಘೋಷಿಸಿದ್ದರು. ಸರಕಾರ ಶೃಂಗಸಭೆ ನಡೆಯುವ ಸ್ಥಳವನ್ನು ಘೋಷಿಸದಿದ್ದರೂ ಗುವಾಹಟಿ ಸಭೆಯ ಆತಿಥ್ಯ ವಹಿಸಲು ತಯಾರಿ ನಡೆಸಿತ್ತು.