ಡಿ.15ರಂದು ನ್ಯೂ ಶಮ್ಸ್ ಶಾಲೆಯಲ್ಲಿ ಭಟ್ಕಳ ಇಂಟರ್ ಸ್ಕೂಲ್ ಸೈನ್ಸ್ ಫೇರ್
ಭಟ್ಕಳ: ನಗರದ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯು ಎ.ಜೆ.ಅಕಾಡೆಮಿ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ರಾಯಚೂರು ಇದರ ಸಹಯೋಗದೊಂದಿಗೆ ಡಿ.15 ರಂದು ವಾರ ಜಾಮಿಯಾಬಾದ್ ರಸ್ತೆಯಲ್ಲಿರುವ ನ್ಯೂಶಮ್ಸ್ ಸ್ಕೂಲ್ ನಲ್ಲಿ ಭಟ್ಕಳ ಇಂಟರ್ ಸ್ಕೂಲ್ ಸೈನ್ಸ್ ಫೇರ್ ಆಯೋಜಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಫಹಮಿದಾ ಮುಲ್ಲಾ ಹಾಗೂ ಸಂಯೋಜಕ ಎಂ.ಆರ್.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10ಗಂಟೆಗೆ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಆಹಮದ್ ಮುಲ್ಲಾ ಸೈನ್ಸ್ ಫೇರ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2ರಿಂದ4 ಗಂಟೆವರೆಗೆ ನಡೆಯುವ ಬಹುಮಾನ ವಿತರಣಾ ಹಾಗೂ ಸಮಾರೋಪ ಸಮಾರಂಭದಲ್ಲಿ ವಿದ್ಯಾಭಾರತಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ರೂಪಾ ಖಾರ್ವಿ, ಸಮಾಜ ಸೇವಕ ನಝೀರ್ ಕಾಶಿಮಜಿ, ಶಾಹೀನ್ ಪಿಯು ಕಾಲೇಜ್ ರಾಯಾಚೂರಿನ ನಿರ್ದೇಶಕ ಮುಹಮ್ಮದ್ ಆಸಿಮುದ್ದೀನ್ ಅಖ್ತರ್, ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಉಪಾಧ್ಯಕ್ಷ ಇಂಜಿನೀಯರ್ ನಝೀರ್ ಆಹಮದ್ ಖಾಝಿ, ಎ.ಜೆ.ಅಕಾಡೆಮಿಯ ನಿರ್ದೇಶಕ ಮುಹಮ್ಮದ್ ಅಬ್ದುಲ್ಲಾ ಜಾವಿದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಥಮಿಕ ಹಂತದಿಂದ ಪ್ರೌಢಶಾಲೆವರೆಗೆ ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮನೋಭಾವ ಬೆಳೆಸುವ ಉದ್ದೇಶದೊಂದಿಗೆ ರಾಯಚೂರಿನ ಎ.ಜೆ.ಅಕಾಡೆಮಿ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ರಾಜ್ಯದ ವಿವಿಧ ನಗರಗಳಲ್ಲಿ ಸೈನ್ಸ್ ಫೇರ್ ಆಯೋಜಿಸಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನ್ಯೂ ಶಮ್ಸ್ ಸ್ಕೂಲ್ನಲ್ಲಿ ಈ ಸೈನ್ಸ್ ಫೇರ್ ಆಯೋಜನೆಗೊಳ್ಳುತ್ತಿದೆ. ಇದರಲ್ಲಿ ಮೂರು ವರ್ಗಗಳಲ್ಲಿ ಒಟ್ಟು ಆರು ಬಹುಮಾನಗಳಿದ್ದು ಬಡ್ಡಿಂಗ್ ಸೈಂಟಿಸ್ಟ್, ಎಮರ್ಜಿಂಗ್ ಸೈಂಟಿಸ್ಟ್ ಮತ್ತು ಯಂಗ್ ಸೈಂಟಿಸ್ಟ್ ಎಂಬ ಪ್ರಶಸ್ತಿ ಫಲಕಗಳನ್ನು ನೀಡಲಾಗುತ್ತಿದೆ. ಅಲ್ಲದೆ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ, ಶಾಲೆಗಳಿಗೆ ಹಾಗೂ ಮಾರ್ಗದರ್ಶಿ ಶಿಕ್ಷಕರಿಗೆ ಪ್ರಶಸ್ತಿಪತ್ರಗಳನ್ನು ನೀಡಲಾಗುತ್ತಿದೆ ಎಂದು ಎಂ.ಆರ್.ಮಾನ್ವಿ ತಿಳಿಸಿದ್ದಾರೆ.