ಗುವಾಹತಿಯಲ್ಲಿ ಎಟಿಎಂಗಳು ಖಾಲಿ.. ಚಿಕನ್ ದರ 500 ರೂಪಾಯಿ!
ಗುವಾಹತಿ, ಡಿ.15: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ಮುಂದುವರಿದಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನಸಾಮಾನ್ಯರಿಗ ತೀವ್ರ ಆಹಾರದ ಅಭಾವ ಎದುರಾಗಿದ್ದು, ಬೆಲೆ ಗಗನಮುಖಿಯಾಗಿದೆ. ಎಟಿಎಂಗಳು ಬರಿದಾಗಿದ್ದು, ಕಾರ್ಡ್ ಸ್ವೈಪಿಂಗ್ ಸಾಧನಗಳು ನಿಷ್ಕ್ರಿಯವಾಗಿವೆ. ಬಹುತೇಕ ಪೆಟ್ರೋಲ್ ಬಂಕ್ಗಳಲ್ಲಿ ಕೂಡಾ ದಾಸ್ತಾನು ಇಲ್ಲದಾಗಿದೆ. ಸರಬರಾಜು ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದು ಹಾಗೂ ಇಂಟರ್ನೆಟ್ ಕಡಿತ ಇದಕ್ಕೆ ಮುಖ್ಯ ಕಾರಣ.
ಶನಿವಾರ ಸಂಜೆ ಏಳು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಿದ ಸಂದರ್ಭದಲ್ಲಿ ಆಹಾರಧಾನ್ಯಗಳ ಬೆಲೆ ಗಗನಕ್ಕೇರಿದೆ. ಈರುಳ್ಳಿದರ ಪ್ರತಿ ಕೆ.ಜಿ.ಗೆ 250 ರೂಪಾಯಿ ತಲುಪಿದ್ದು, ಆಲೂಗಡ್ಡೆ 60 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಳಿ ಮಾಂಸದ ಬೆಲೆ 500 ರೂಪಾಯಿ, ರೋಹು ಮೀನಿನ ಬೆಲೆ 420 ರೂಪಾಯಿ ಆಗಿದೆ. ಸಾಮಾನ್ಯವಾಗಿ 10 ರೂಪಾಯಿಗೆ ಮಾರಾಟವಾಗುವ ಒಂದು ಕಟ್ಟು ಪಾಲಕ್ ಸೊಪ್ಪಿನ ಬೆಲೆ 60 ರೂಪಾಯಿ ತಲುಪಿದೆ.
ಗುವಾಹತಿ ನಗರಕ್ಕೆ ತರಕಾರಿ ಮತ್ತು ಇತರ ಅಗತ್ಯ ಸಾಮಗ್ರಿಗಳು ಹಿಂಸಾಚಾರಪೀಡಿತ ಹೊರವಲಯಿಂದ ಬರುತ್ತವೆ. ಇದನ್ನು ನಗರದ ಹೋಲ್ಸೇಲ್ ಮಾರುಕಟ್ಟೆಯಲ್ಲಿ ಚಿಲ್ಲರೆ ಮಾರಾಟಗಾರರಿಗ ಪೂರೈಸಲಾಗುತ್ತದೆ. ಹಿಂಸಾಚಾರದಿಂದಾಗಿ ಸರಬರಾಜು ವ್ಯವಸ್ಥೆ ಸ್ಥಗಿತಗೊಂಡಿದೆ.