ವಿದ್ಯಾರ್ಥಿಗಳಿಂದ ಹಲ್ಲೆ: ಜೆಎನ್ಯು ಕುಲಪತಿ ದೂರು
ಹೊಸದಿಲ್ಲಿ, ಡಿ.15: ಜವಾಹರಲಾಲ್ ನೆಹರೂ ವಿವಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಕುಲಪತಿ ಎಂ.ಜಗದೀಶ್ ಕುಮಾರ್ ದೂರು ನೀಡಿದ್ದಾರೆ.
"ನಾನು ಆಡಳಿತ ಕಚೇರಿಯಿಂದ ಇತರ ಅಧಿಕಾರಿಗಳ ಜತೆ ಹೋಗುತ್ತಿದ್ದಾಗ ಉದ್ರಿಕ್ತ ವಿದ್ಯಾರ್ಥಿಗಳು ನನ್ನನ್ನು ಸುತ್ತುವರಿದರು... ನನ್ನ ಮೇಲೆ ಹಲ್ಲೆ ನಡೆಸುವ ಪ್ರಯತ್ನವನ್ನೂ ಮಾಡಿದ ವಿದ್ಯಾರ್ಥಿಗಳು ನನ್ನ ಕೈ ಹಾಗೂ ಬಟ್ಟೆ ಎಳೆದರು" ಎಂದು ಹೇಳಿದ್ದಾರೆ. "ನಾನು ವಾಹನ ಏರಿದಾಗ, ವಿದ್ಯಾರ್ಥಿಗಳು ಕೀ ಕಿತ್ತುಕೊಂಡರು. ಚಾಲಕನ ಸಮಯಪ್ರಜ್ಞೆಯಿಂದ ಮತ್ತೊಂದು ವಾಹನದಲ್ಲಿ ಅಲ್ಲಿಂದ ಹೋಗುವುದು ಸಾಧ್ಯವಾಯಿತು" ಎಂದು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಕಚೇರಿಯನ್ನು ಧ್ವಂಸಗೊಳಿಸಿದ್ದಾಗಿಯೂ ಅವರು ಆಪಾದಿಸಿದ್ದಾರೆ.
ವಿದ್ಯಾರ್ಥಿಗಳನ್ನು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಮೂಲಕ ಪತ್ತೆ ಮಾಡಲಾಗುವುದು. ಇದು ಅಪರಾಧ ಕೃತ್ಯವಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ವಿವರಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಆಡಳಿತ ಕಚೇರಿ ವಿದ್ಯಾರ್ಥಿಗಳ ವಶದಲ್ಲಿದ್ದು, ಆಡಳಿತ ಕಚೇರಿಗೆ ಕುಲಪತಿ ಹಾಗೂ ಇತರ ಅಧಿಕಾರಿಗಳು ಬರುವ ವೇಳೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿತ್ತು.