ಮಾನವ ಸಂಬಂಧಗಳು ವ್ಯಾವಹಾರಿಕವಾಗಬಾರದು: ರಫೀಉದ್ದೀನ್ ಕುದ್ರೋಳಿ
ಮಂಗಳೂರು, ಡಿ.15: ಇಂದು ಎಲ್ಲ ರೀತಿಯ ಸಂಬಂಧಗಳು ವ್ಯಾವಹಾರಿಕವಾಗಿದೆ. ಎಲ್ಲದರಲ್ಲೂ ಮಾನವ ತನ್ನ ಲಾಭವನ್ನು ದೃಷ್ಟಿಯಲ್ಲಿಟ್ಟು ವ್ಯವಹರಿಸುತ್ತಿದ್ದಾನೆ ಅದಕ್ಜಾಗಿ ಕೆಲವೊಮ್ಮೆ ನೈತಿಕ ಮೇರೆಗಳನ್ನೂ ಮೀರುತ್ತಾನೆ. ಮಾನವೀಯತೆ ನಶಿಸಿ ಹೋಗುತ್ತಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರವಾದಿ (ಸ.) ರವರ ಬೋಧನೆಗಳು ಕಾಲದ ಅಗತ್ಯವೂ ಬೇಡಿಕೆಯೂ ಆಗಿದೆ ಎಂದು ರಫೀಉದ್ದೀನ್ ಕುದ್ರೋಳಿ ಹೇಳಿದ್ದಾರೆ.
‘ಯುನಿವೆಫ್ ಕರ್ನಾಟಕದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಎಂಬ ಸೀರತ್ ಅಭಿಯಾನದ ಪ್ರಯುಕ್ತ ಬೆಂಗರೆ ಕಸ್ಬಾ ಶಾಖೆ ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
ಕಡಿದು ಹೋಗಿರುವ ಅಥವಾ ಶಿಥಿಲಗೊಂಡಿರುವ ಕುಟುಂಬ ಸಂಬಂಧಗಳನ್ನು ಮರುಸ್ಥಾಪಿಸಲು ಪ್ರವಾದಿಯ(ಸ.) ಸಂದೇಶಗಳು ನಮ್ಮ ಬದುಕಿಗೆ ಅನಿವಾರ್ಯ. ಈ ನಿಟ್ಟಿನಲ್ಲಿ ಯುನಿವೆಫ್ ಕರ್ನಾಟಕ ಈ ಅಭಿಯಾನದ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದರು.
ಯನಿವೆಫ್ ಕರ್ನಾಟಕದ ಚಟುವಟಿಕೆಗಳ ಪ್ರಾತ್ಯಕ್ಷಿಕೆಯನ್ನು ಸೈಫುದ್ದೀನ್ ಕುದ್ರೋಳಿ ಪ್ರದರ್ಶಿಸಿದರು. ಉದ್ಯಮಿ ಇದ್ದಿನ್ ಕುಂಞಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸದಸ್ಯ ಉಮರ್ ಮುಖ್ತಾರ್ ಕಿರಾಅತ್ ಪಠಿಸಿದರು.
ಜಿಲ್ಲಾ ಕಾರ್ಯದರ್ಶಿ ಅಡ್ವೋಕೇಟ್ ಸಿರಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧ್ಯಕ್ಷ ಅಬ್ದುಲ್ಲಾ ಪಾರೆ ಮತ್ತು ಸಂಚಾಲಕ ಇಫ್ರಾಝ್ ಉಪಸ್ಥಿತರಿದ್ದರು.