ಜ.3ರಿಂದ ಕರಾವಳಿ ಉತ್ಸವ: ಸಚಿವ ಕೋಟಾ

ಮಂಗಳೂರು, ಡಿ.16: ಪ್ರಸಕ್ತ ಸಾಲಿನ ಕರಾವಳಿ ಉತ್ಸವ ಜನವರಿ 3ರಿಂದ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸೋಮವಾರ ಮಹಾನಗರಪಾಲಿಕೆ ಸಭಾಂಗಣದಲ್ಲಿ ಕರಾವಳಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಮಂಗಳಾ ಕ್ರೀಡಾಂಗಣ ಹಾಗೂ ಕದ್ರಿ ಉದ್ಯಾನವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ನಾಡಿನ ಸಂಸ್ಕೃತಿ, ಕಲೆ, ಜನಪದ, ಕ್ರೀಡೆಯ ಪ್ರದರ್ಶನ ಈ ಕರಾವಳಿ ಉತ್ಸವದಲ್ಲಿ ಪ್ರತಿಬಿಂಬಿತವಾಗಬೇಕು. ಈ ನಿಟ್ಟಿನಲ್ಲಿ ಉತ್ಸವದ ಎಲ್ಲಾ ಉಪಸಮಿತಿಗಳು ಉತ್ತಮ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಕರಾವಳಿ ಉತ್ಸವದ ಉದ್ಘಾಟನೆ ದಿನದಂದು ನಡೆಯುವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ಎಲ್ಲ ಪ್ರಕಾರಗಳ ಸಾಂಸ್ಕೃತಿಕ ತಂಡಗಳು ಮತ್ತು ಸ್ತಬ್ದ ಚಿತ್ರಗಳು ಒಳಗೊಂಡಿರಬೇಕು. ಉತ್ಸವದ ಯಶಸ್ಸು ಮೆರವಣಿಗೆಯಲ್ಲಿ ಪ್ರತಿಬಿಂಬಿತವಾಗುವುದರಿಂದ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ತುಳು, ಬ್ಯಾರಿ ಹಾಗೂ ಕೊಂಕಣಿ ಸಾಹಿತ್ಯ ಅಕಾಡಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜೊತೆಗೂಡಿ ಮೆರವಣಿಗೆಯ ರೂಪುರೇಷೆ ನಿರ್ಧರಿಸಿ ಅಂತಿಮಗೊಳಿಸಲು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕರಾವಳಿ ಉತ್ಸವ ಮೈದಾನ ಕಿರಿದಾಗಿರುವುದರಿಂದ ಹೆಚ್ಚು ಸ್ಟಾಲ್ಗಳನ್ನು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಸಮಸ್ಯೆ ಆಗಿದೆ ಎಂಬ ಬಗ್ಗೆ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಪೂರ್ತಿ ಕರಾವಳಿ ಉತ್ಸವ ಮೈದಾನದಲ್ಲಿ ಉತ್ಸವ ನಡೆಸುವ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿರ್ಧಾರಕ್ಕೆ ಬರಲು ಸೂಚಿಸಿದ ಸಚಿವರು, ಉತ್ಸವದ ಉದ್ಘಾಟನೆಯನ್ನು ಖ್ಯಾತನಾಮರಿಂದ ನಡೆಸುವ ಬಗ್ಗೆ ಜಿಲ್ಲಾಡಳಿತ ತೀರ್ಮಾನಿಸಲಿದೆ. ಉತ್ಸವದ ಸಂದರ್ಭ ಯಾವುದೇ ಸಂಚಾರ ಸಮಸ್ಯೆ ಆಗದಂತೆ ಕ್ರಮ ವಹಿಸಲು ತಿಳಿಸಿದರು.
ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವ : ಉತ್ಸವದ ಕೊನೆಯ ಮೂರು ದಿನಗಳಲ್ಲಿ ಪಣಂಬೂರು ಬೀಚ್ನಲ್ಲಿ ಬೀಚ್ ಉತ್ಸವ ನಡೆಯಲಿದೆ. ಈ ಸಲ ವಿಶೇಷ ಆಕರ್ಷಣೆಯಾಗಿ ಅಂತರ್ರಾಷ್ಟ್ರೀಯ ಗಾಳಿಪಟ ಉತ್ಸವ ನಡೆಸಲಾಗುವುದು. ಈ ನಿಟ್ಟಿನಲ್ಲಿ ಅಂತರ್ರಾಷ್ಟ್ರೀಯ ಗಾಳಿಪಟ ಕ್ರೀಡಾಳುಗಳನ್ನು ನಗರಕ್ಕೆ ಕರೆತರಲು ಬೀಚ್ ಉತ್ಸವ ಉಪಸಮಿತಿ ಸಿದ್ಧತೆ ನಡೆಸಲು ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಪಣಂಬೂರು ರಾಷ್ಟ್ರೀಯ ಹೆದ್ದಾರಿಯಿಂದ ಬೀಚ್ಗೆ ಹೋಗುವ ರಸ್ತೆಯ ಕಾಂಕ್ರಿಟೀಕರಣ ನಡಯುತ್ತಿದೆ. ಜನವರಿ 5ರೊಳಗೆ ಈ ರಸ್ತೆಯನ್ನು ಸಂಚಾರಕ್ಕೆ ಬಿಟ್ಟು ಕೊಡಲು ಸಚಿವರು ಎನ್ಎಂಪಿಟಿ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್, ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್, ಅಕಾಡಮಿಗಳ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್, ರಹೀಂ ಉಚ್ಚಿಲ್, ಜಗದೀಶ್ ಪೈ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಮತ್ತಿತರರು ಉಪಸ್ಥಿತರಿದ್ದರು.