ದೇಶದಲ್ಲಿ ಪ್ರತಿವರ್ಷ ಶೇ.40ರಷ್ಟು ಆಹಾರ ಪೋಲಾಗುತ್ತಿದೆ: ಸಿಎಂ ಯಡಿಯೂರಪ್ಪ
ಆಗ್ರೋ ಫುಡ್ ಎಕ್ಸ್ಪೋ-2020ಕ್ಕೆ ಚಾಲನೆ

ಬೆಂಗಳೂರು, ಡಿ.16: ದೇಶದಲ್ಲಿ ಪ್ರತಿವರ್ಷ ಶೇ.40ರಷ್ಟು ಆಹಾರ ಧಾನ್ಯಗಳು ಹಾಳಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ಎಫ್ಕೆಸಿಸಿಐ ನಗರದಲ್ಲಿ ಆಯೋಜಿಸಿದ್ದ ಆಗ್ರೋ ಫುಡ್ ಎಕ್ಸ್ಪೋ-2020 ಕರ್ಟನ್ ರೈಸರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿವರ್ಷ 20ದಶಲಕ್ಷ ಟನ್ಗಳಷ್ಟು ಆಹಾರ ಪೋಲಾಗುತ್ತಿದೆ. ಇಷ್ಟು ಆಹಾರ ಪದಾಥರ್ಗಳನ್ನು ಸಂರಕ್ಷಿಸಲು ಸಂಸ್ಕರಣಾ ಘಟಕಗಳು ಸೇರಿದಂತೆ ಆಧುನಿಕ ಉಪಕರಣಗಳನ್ನು ಅನ್ವೇಷಿಸಬೇಕಾಗಿದೆ ಎಂದು ತಿಳಿಸಿದರು.
ರಾಜ್ಯ ಸರಕಾರ ಸಾವಯುವ ಕೃಷಿಗೆ ಹೆಚ್ಚು ಒತ್ತು ನೀಡಿದ್ದು, ಪ್ರತಿ ತಾಲೂಕಿಗೂ ಖುದ್ದು ಭೇಟಿ ನೀಡಿ ರೈತರಿಗೆ ಅರಿವು ಮೂಡಿಸಲಾಗುವುದು. ಒಟ್ಟಾರೆ ಕೃಷಿಗೆ ಉತ್ತೇಜನ ಹಾಗೂ ಪ್ರತಿ ರೈತನ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ನಮ್ಮದು ರೈತಪರವಾದ ಸರಕಾರವಾಗಿದೆ. ಹೀಗಾಗಿ ರೈತರಿಗೆ ಹೆಗಲುಕೊಟ್ಟು ನಡೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಎಫ್ಕೆಸಿಸಿಐ ಆಯೋಜಿಸಿರುವ ಕೃಷಿ ಮೇಳವು ರಾಜ್ಯದ ಸಾವಯವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದನ್ನು ರಾಜ್ಯದ ಪ್ರತಿಯೊಬ್ಬ ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ಎಫ್ಕೆಸಿಸಿಐ ಅಧ್ಯಕ್ಷ ಜನಾರ್ದನ್ ಮಾತನಾಡಿ, ಎ.22, 2020ರಿಂದ 26ರವರೆಗೆ ನಗರದ ಆರಮನೆ ಮೈದಾನದಲ್ಲಿ ಆಗ್ರೋ ಫುಡ್ ಎಕ್ಸ್ ಪೋ ನಡೆಯಲಿದೆ. ಈಗಾಗಲೇ ಇಸ್ರೇಲ್, ನೆದರ್ಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಇದರಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ಆಗ್ರೋ ಫುಡ್ ಎಕ್ಸ್ ಪೋ ಮೇಳಕ್ಕೆ 2ಸಾವಿರ ಪ್ರತಿನಿಧಿಗಳು, ಒಂದು ಲಕ್ಷ ಜನರು ಭಾಗವಹಿಸಲಿದ್ದು, 450ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ರಾಜ್ಯ ಸರಕಾರ ಇದಕ್ಕಾಗಿ 3 ಕೋಟಿ ರೂ.ಅನುದಾನ ನೀಡಿದೆ ಎಂದು ಅವರು ಹೇಳಿದರು. ಈ ವೇಳೆ ಗೃಹ ಸಚಿವ ಬಸವರಾಜ ಮೊಮ್ಮಾಯಿ ಮತ್ತಿತರರು ಭಾಗವಹಿಸಿದ್ದರು.
ಶಿವಮೊಗ್ಗದಲ್ಲಿ ಸಾವಯವ ಕೃಷಿ ಮೇಳ
ರಾಜ್ಯದಲ್ಲಿ ಸಾವಯುವ ಕೃಷಿಗೆ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿದೆ. ಇದರ ಮಹತ್ವದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಪ್ರತಿ ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಪ್ರತಿವರ್ಷ ಬೆಂಗಳೂರಿನಲ್ಲಿ ಮಾತ್ರ ಸಾವಯವ ಕೃಷಿ ಹಮ್ಮಿಕೊಳ್ಳಲಾಗುತ್ತಿತ್ತು. ಈ ವರ್ಷ ಶಿವಮೊಗ್ಗದಲ್ಲಿ ಸಾವಯವ ಕೃಷಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಬೇರೆ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ







