ಸಮುದಾಯ ಗ್ರೂಪ್ ಹೆಸರಿನಲ್ಲಿ ಹಂಚಿ ಹೋಗುವುದು ಸರಿಯಲ್ಲ :ಯೆನೆಪೋಯ ಅಬ್ದುಲ್ಲ ಕುಂಞಿ
ಪುತ್ತೂರು: ಮುಸ್ಲಿಂ ಸಮುದಾಯದಲ್ಲಿನ ಒಡಕು, ಭಿನ್ನತೆಗಳನ್ನು ತೊಡೆದು ಹಾಕಬೇಕು. ಗ್ರೂಪ್ನ ಹೆಸರಿನಲ್ಲಿ ಸಮುದಾಯ ಹಂಚಿ ಹೋಗುವುದು ಸರಿಯಲ್ಲ. ಎಲ್ಲವನ್ನು ಮರೆತು ಒಗ್ಗಟ್ಟು ಪ್ರದರ್ಶಿಸುವ ಗುಣ ನಮ್ಮಲ್ಲಿ ಬೆಳೆಯಬೇಕು. ಗ್ರೂಪ್ ಬಿಟ್ಟು ಸಹೋದರರಂತೆ ಒಟ್ಟಾಗಿ ಬಾಳೋಣ. ನಾವೆಲ್ಲರೂ ಸಮುದಾಯಕ್ಕಾಗಿ ಮತ್ತು ಸಮಾಜಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾಧ್ಯಕ್ಷ, ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಹಾಜಿ ವೈ ಅಬ್ದುಲ್ಲ ಕುಂಞಿ ಹೇಳಿದರು.
ಅವರು ಸೋಮವಾರ ಪುತ್ತೂರು ಬಸ್ಸ್ಟ್ಯಾಂಡ್ ಸಮೀಪದ ಎ.ಎಂ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿಯ ನೂತನ ಕಚೇರಿಯನ್ನು ಉದ್ಘಾಟಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರವಾದಿಯವರು ತೋರಿಸಿದ ಹಾದಿಯಲ್ಲಿ ಸಾಗಿದರೆ ಯಾವ ಸಮಸ್ಯೆಯೂ ನಮಗೆ ಎದುರಾಗುವುದಿಲ್ಲ, ನಾವು ಗ್ರೂಪ್ಗಳನ್ನು ಬಿಟ್ಟು ಅಣ್ಣ ತಮ್ಮಂದಿರಂತೆ ಕೆಲಸ ಮಾಡಿದಾಗ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದರು.
ಪುತ್ತೂರಿನ ಆಸ್ಪತ್ರೆ ನಿರ್ಮಿಸುವ ಬಗ್ಗೆ ಸ್ಥಳೀಯರ ಬೇಡಿಕೆಯಿದೆ. ಈ ಬಗ್ಗೆ ತಾನು ಮುಂದಿನ ಒಂದು ವಾರದ ಒಳಗಾಗಿ ಸಮಿತಿ ಯನ್ನು ನಿರ್ಮಿಸಿ ಈ ಬಗ್ಗೆ ಪರಿಶೀಲನೆಗೆ ಪುತ್ತೂರಿಗೆ ಕಳುಹಿಸುತ್ತೇನೆ. ಸಮಿತಿಯ ಪರಿಶೀಲನೆಯ ಬಳಿಕ ಈ ಬೇಡಿಕೆ ಅರ್ಹವೆಂದು ಕಂಡು ಬಂದಲ್ಲಿ ಆಸ್ಪತ್ರೆ ಸ್ಥಾಪನೆಯ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಂಯೋಜಕ ಎಮ್ಮೆಸ್ಸೆಂ ಝೈನಿ ಕಾಮಿಲ್ ಮಾತನಾಡಿ ಮುಸ್ಲಿಂ ಜಮಾಅತ್ ಸ್ಥಾಪನೆಯ ಮೂಲಕ ಇಲ್ಲಿನ ಸಮುದಾಯ ಅಭಿವೃದ್ಧಿಯ ಕಾರ್ಯಕ್ಷೇತ್ರಗಳಿಗೆ ಬಲ ತುಂಬುವ ಕೆಲಸ ಮಾಡಲಾಗಿದೆ. ಈ ಕ್ಷೇತ್ರಕ್ಕೆ ಸಮರ್ಥ ಉಮರಾ ನಾಯಕರ ನೇತೃತ್ವ ಲಭಿಸಿದೆ, ದೇಶದ ಅಖಂಡತೆ, ಸಾರ್ವಭೌಮತೆ ಮತ್ತು ಎಲ್ಲಾ ಸಮುದಾಯದ ಜೊತೆಗೆ ಸೌಹಾರ್ದತೆ, ಐಕ್ಯತೆಯನ್ನು ಬೆಳೆಸುವಲ್ಲಿ ಮುಸ್ಲಿಂ ಜಮಾಅತ್ ಕೈಜೋಡಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯಾಧ್ಯಕ್ಷ ರಶೀದ್ ಹಾಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರ.ಕಾರ್ಯದರ್ಶಿ ಮಮ್ತಾಝ್ ಅಲಿ, ಹಜ್ಜ್ ಕಮಿಟಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಮಾತನಾಡಿ ಶುಭ ಹಾರೈಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕೋಶಾಧಿಕಾರಿ ಅರಬಿ ಹಾಜಿ, ಜಿಲ್ಲಾ ಕಾರ್ಯದರ್ಶಿ ಹಾಜಿ ಮುಸ್ತಫಾ ಜನತಾ ಸುಳ್ಯ, ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್, ಎಪಿಎಂಸಿ ಸದಸ್ಯ ಶಕೂರ್ ಹಾಜಿ, ಕಡಬ ತಾಲೂಕು ಅಧ್ಯಕ್ಷ ಮೀರಾ ಸಾಹೇಬ್ ಕಡಬ, ಸುಳ್ಯ ತಾಲೂಕು ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಪುತ್ತೂರು ತಾಲೂಕು ಉಪಾಧ್ಯಕ್ಷರುಗಳಾದ ಇಂಜಿನಿಯರ್ ಆಲಿಕುಂಞಿ ಕೊರಿಂಗಿಲ, ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು, ಖಾಸಿಂ ಹಾಜಿ ಮಿತ್ತೂರು, ಅಬ್ದುಲ್ ರಹಿಮಾನ್ ಹಾಜಿ ಬೈತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಬೈತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಹಾಜಿ ಮುಹಮ್ಮದ್ ಕುಕ್ಕುವಳ್ಳಿ ವಂದಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ನಿರೂಪಿಸಿದರು.