ಜಾಮಿಯಾದಲ್ಲಿ ಪೊಲೀಸ್ ದೌರ್ಜನ್ಯ: ಹಾರ್ವರ್ಡ್, ಯೇಲ್ ಸೇರಿ ಅಮೆರಿಕದ ವಿವಿಗಳ ವಿದ್ಯಾರ್ಥಿಗಳಿಂದ ಖಂಡನೆ
“ವಿದ್ಯಾರ್ಥಿಗಳ ವಿರುದ್ಧದ ಕ್ರೂರ ಅಟ್ಟಹಾಸ ಆಘಾತಕಾರಿ”
ಹೊಸದಿಲ್ಲಿ, ಡಿ.17: ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಜೆಎಂಐ)ದಲ್ಲಿ ರವಿವಾರ ವಿದ್ಯಾರ್ಥಿಗಳ ವಿರುದ್ಧ ಪೊಲೀಸರ ಕ್ರೂರ ಹಿಂಸಾಚಾರವನ್ನು ಖಂಡಿಸಿ ಅಮೆರಿಕದಾದ್ಯಂತ ಹಲವಾರು ಪ್ರತಿಷ್ಠಿತ ವಿವಿಗಳ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಹೇಳಿಕೆಯೊಂದನ್ನು ಹೊರಡಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ದಾಳಿಯು ಭಾರತದ ಸಂವಿಧಾನ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನಡಿ ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಅಸಂವಿಧಾನಿಕ ಮತ್ತು ತಾರತಮ್ಯದಿಂದ ಕೂಡಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಏಕತೆಯನ್ನು ವ್ಯಕ್ತಪಡಿಸಿರುವ ಹೇಳಿಕೆಗೆ ಹಾರ್ವರ್ಡ್, ಕೊಲಂಬಿಯಾ, ಯೇಲ್, ನ್ಯೂಯಾರ್ಕ್, ಸ್ಟಾನ್ಫೋರ್ಡ್,ಜಾನ್ಸ್ ಹಾಪ್ಕಿನ್ಸ್, ಕಾರ್ನೆಲ್, ಎಂಐಟಿ ಮತ್ತು ಇತರ ಹಲವಾರು ವಿವಿಗಳ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಸಹಿ ಮಾಡಿದ್ದಾರೆ.
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ಮತ್ತು ಅಲಿಗಡ ಮುಸ್ಲಿಮ್ ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು,ಅರೆಸೈನಿಕ ಪಡೆಗಳು ಹಿಂಸಾಚಾರವನ್ನು ಎಸಗಿರುವುದು ಮತ್ತು ಅವರ ವಿರುದ್ಧ ಕಾನೂನುಬಾಹಿರ ಮತ್ತು ವಿವೇಚನಾರಹಿತ ಕ್ರಮಗಳನ್ನು ಕೈಗೊಂಡಿರುವುದು ನಿಸ್ಸಂಶಯವಾಗಿ ಕಂಡುಬರುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿವಿ ಆವರಣಗಳಲ್ಲಿ ಪೊಲೀಸರು ಮತ್ತು ಅರೆ ಮಿಲಿಟರಿ ಪಡೆಗಳ ಪ್ರವೇಶವನ್ನು ಖಂಡಿಸಿರುವ ಅಮೆರಿಕದ ವಿದ್ಯಾರ್ಥಿಗಳು, ನಾಗರಿಕರ ವಿರುದ್ಧ ಈ ಕ್ರೂರ ಅಟ್ಟಹಾಸವು ಯಾವುದೇ ಪ್ರಜಾಸತ್ತಾತ್ಮಕ ಸಮಾಜದ ಆತ್ಮಪ್ರಜ್ಞೆಗೆ ಆಘಾತಕಾರಿಯಾಗಿದೆ ಎಂದಿದ್ದಾರೆ.
ಹಿಂಸಾಚಾರದ ಈ ಘಟನೆಗಳು ಕಾನೂನಿನ ಆಡಳಿತಕ್ಕೊಳಪಟ್ಟ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಪೊಲೀಸರ ಕಾರ್ಯನಿರ್ವಹಣೆಗೆ ಮಾರ್ಗದರ್ಶಿಯಾಗಿರುವ ಪ್ರತಿಯೊಂದು ನಿಯಮವನ್ನೂ ಸಂಪೂರ್ಣವಾಗಿ ಕಡೆಗಣಿಸಲಾ ಗಿದೆ ಎನ್ನುವುದನ್ನು ತೋರಿಸುತ್ತಿವೆ. ಪೊಲೀಸ್ ಕ್ರೌರ್ಯದ ಹೆಚ್ಚಿನ ಬಲಿಪಶುಗಳು ಮುಸ್ಲಿಮರೇ ಆಗಿರುವ ಹಿನ್ನೆಲೆಯಲ್ಲಿ ಇವು ಅಲ್ಪಸಂಖ್ಯಾತ ಗುಂಪಿನ ವಿರುದ್ಧ ನಿರ್ದೇಶಿತ ಹಿಂಸಾಚಾರದ ಆಘಾತಕಾರಿ ಘಟನೆಗಳಾಗಿವೆ ಎಂದು ಹೇಳಿಕೆಯು ತಿಳಿಸಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆ ಸಂದರ್ಭ ಅಸ್ಸಾಮಿನಲ್ಲಿ ಐವರು ಕೊಲ್ಲಲ್ಪಟ್ಟಿರುವುದನ್ನೂ ಖಂಡಿಸಿರುವ ವಿದ್ಯಾರ್ಥಿಗಳು,ರಾಜ್ಯದಲ್ಲಿ ಕಾನೂನುಬಾಹಿರವಾಗಿ ಅಂತರ್ಜಾಲವನ್ನು ಸ್ಥಗಿತಗೊಳಿಸಿರುವುದು ಅಲ್ಲಿ ನಡೆಯುತ್ತಿರುವ ಘಟನಾವಳಿಗಳ ವರದಿಗೆ ಸಂಪೂರ್ಣ ತಡೆಯನ್ನು ಹಾಕಿದೆ. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳು ಮತ್ತು ಕಾನೂನು ಬಾಹಿರ ಪೊಲೀಸ್ ಕ್ರಮಗಳ ಬಗ್ಗೆ ಹೇಳಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಪೊಲೀಸರಿಂದ ಹಿಂಸಾಚಾರ ನಿಲ್ಲಬೇಕು,ದಿಲ್ಲಿ ಮತ್ತು ಉತ್ತರ ಪ್ರದೇಶ ಪೊಲೀಸರು ಹಾಗೂ ಸಿಆರ್ಪಿಎಫ್ನಿಂದ ಅಧಿಕಾರ ದುರುಪಯೋಗದ ಬಗ್ಗೆ ತಕ್ಷಣ ತನಿಖೆ ನಡೆಯಬೇಕು,ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರು ತಮ್ಮ ಮೂಲಭೂತ ಹಕ್ಕುಗಳನ್ನು ಬಳಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.