ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಪೊಲೀಸ್ ಬೂತ್ಗೆ ಬೆಂಕಿ
ಪೌರತ್ವ ಕಾಯ್ದೆ ವಿರುದ್ಧ ನಿಲ್ಲದ ಆಕ್ರೋಶ
ಹೊಸದಿಲ್ಲಿ, ಡಿ.17: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ದಿಲ್ಲಿಯ ಸೀಲಮಪುರದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು,ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲುತೂರಾಟ ನಡೆಸಿದ್ದಲ್ಲದೆ,ಪೊಲೀಸ್ ಚೌಕಿಯೊಂದಕ್ಕೆ ಬೆಂಕಿಯನ್ನೂ ಹಚ್ಚಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದರು.
ಪರಿಸ್ಥಿತಿಯ ಮೇಲೆ ನಿಗಾಯಿರಿಸಲು ಪೊಲೀಸರು ಡ್ರೋನ್ಗಳನ್ನು ಬಳಸಿಕೊಂಡಿದ್ದರು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಪ್ರತಿಭಟನೆ ಆರಂಭಗೊಂಡಿದ್ದು, ಪ್ರದೇಶದ ಜನರು ಸೀಲಮಪುರ ಟಿ-ಪಾಯಿಂಟ್ನಲ್ಲಿ ಜಮಾಯಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದರೆ, ಪ್ರತಿಭಟನೆ ಶಾಂತಿಯುತವಾಗಿಯೇ ಆರಂಭಗೊಂಡಿತ್ತು,ಆದರೆ ನಂತರ ಹಿಂಸಾಚಾರಕ್ಕೆ ತಿರುಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಪ್ರತಿಭಟನಾಕಾರರು ಕಾರುಗಳಿಗೆ ಹಾನಿಯನ್ನುಂಟು ಮಾಡಿದ್ದು,ರಸ್ತೆಗಳ ತುಂಬ ಕಲ್ಲುಗಳು ಬಿದ್ದಿದ್ದವು. ರಸ್ತೆಗಳಲ್ಲಿ ಅಲ್ಲಲ್ಲಿ ಬೆಂಕಿ ಹಾಕಲಾಗಿದ್ದು,ಹೊಗೆ ತುಂಬಿಕೊಂಡಿತ್ತು. ಮುಖ ಮುಚ್ಚಿಕೊಂಡಿದ್ದ ಕೆಲವರು ಸೇರಿದಂತೆ ಯುವಕರ ಗುಂಪುಗಳು ಪೊಲೀಸರತ್ತ ಕಲ್ಲುಗಳು ಮತ್ತು ಬಾಟ್ಲಿಗಳನ್ನು ಎಸೆಯುತ್ತಿದ್ದವು.
ಪ್ರತಿಭಟನಾಕಾರರು ಪೌರತ್ವ ಕಾಯ್ದೆ,ಎನ್ಆರ್ಸಿ ಮತ್ತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. 66 ಅಡಿ ಅಗಲದ ಸೀಲಮಪುರ-ಜಾಫರಾಬಾದ್ ರಸ್ತೆಯನ್ನು ಪ್ರತಿಭಟನೆಯಿಂದಾಗಿ ವಾಹನಗಳ ಸಂಚಾರಕ್ಕೆ ಮುಚ್ಚಲಾಗಿತ್ತು.
ಸೀಲಮಪುರ ಮತ್ತು ಗೋಕುಲಪುರಿ ರೈಲು ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದ್ದು, ಯಾವುದೇ ರೈಲುಗಳಿಗೆ ಈ ನಿಲ್ದಾಣಗಳಲ್ಲಿ ನಿಲ್ಲಲು ಅವಕಾಶ ನೀಡಿರಲಿಲ್ಲ. ಅತ್ತ ವೆಲ್ಕಂ,ಜಾಫರಾಬಾದ್ ಮತ್ತು ವೌಜಪುರ-ಬಾಬರ್ಪುರ ಮೆಟ್ರೋ ರೈಲು ನಿಲ್ದಾಣಗಳನ್ನೂ ಮುಚ್ಚಲಾಗಿತ್ತು.