21ಕ್ಕೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೃಷಿಕರ ಬೃಹತ್ ಪ್ರತಿಭಟನೆ
ಉಡುಪಿ, ಡಿ.17:ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಸಂಕಷ್ಟ-ಸಮಸ್ಯೆ ಗಳನ್ನು ಜಿಲ್ಲಾಡಳಿತ-ಸರಕಾರಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗದ ಹಿನ್ನೆಲೆಯಲ್ಲಿ ಮತ್ತು ಸರಕಾರದ ವಿಳಂಬ ಧೋರಣೆಯನ್ನು ವಿರೋಧಿಸಿ ಜಿಲ್ಲಾ ಕೃಷಿಕ ಸಂಘವು ಡಿ.21ರ ಶನಿವಾರ ಬೆಳಗ್ಗೆ 11 ಗಂಟೆಗೆ ಮಣಿಪಾಲ ದಲ್ಲಿರುವ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಯನ್ನು ಆಯೋಜಿಸಿದೆ.
ಬೇಡಿಕೆಗಳು: 120 ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ರೈತರ ಕುಮ್ಕಿ ಹಕ್ಕನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು. ಕುಮ್ಕಿ ಜಮೀನು ಸರ್ವೇ ಮಾಡಿ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ಕೈಬಿಡಬೇಕು. ಕೃಷಿ ಬೆಲೆ ಆಯೋಗವಿದ್ದರೂ ಕೃಷಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಮುಂಗಾರು ಹಂಗಾಮಿನ ಭತ್ತವನ್ನು ಅಕ್ಟೋಬರ್ನಿಂದ ಪ್ರಾರಂಭಿಸಿ ವರ್ಷ ಪೂರ್ತಿ ರೂ.2500 ಬೆಂಬಲ ಬೆಲೆಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು. ಭತ್ತ ನಾಟಿ/ಕಟಾವು ಸಮಯ ದಲ್ಲಿ ರೈತರಿಗೆ ಯಂತ್ರೋಪಕರಣಗಳ ಕೊರತೆ ನೀಗಿಸಲು ಬೇರೆ ಜಿಲ್ಲೆಗಳ, ಯಂತ್ರಧಾರೆ ಯೋಜನೆ ಯಂತ್ರಗಳನ್ನು ನಮ್ಮ ಜಿಲ್ಲೆಗೆ ತರಿಸುವ ವ್ಯವಸ್ಥೆಗಳಾಗಬೇಕು.
ಕೃಷಿಕರ ಹೊಸ ಪಂಪುಗಳ ಸಂಪರ್ಕಕ್ಕೆ ’ಮೆಸ್ಕಾಂ’ 10,000ರೂ. ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸುವುದಲ್ಲದೆ, ಹಿಂದಿನ ವರ್ಷಗಳಲ್ಲಿ ಸಂಪರ್ಕಗೊಂಡಿರುವ ಪಂಪುಗಳಿಗೂ ಇದನ್ನು ವಸೂಲು ಮಾಡಬಾರದು. ಕಾಡು ಪ್ರಾಣಿಗಳ ಹಾವಳಿಯಿಂದ ಜಿಲ್ಲೆಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ. ಸರಕಾರ ಈ ಬಗ್ಗೆ ತಕ್ಷಣ ಸೂಕ್ತಕ್ರಮ ಕೈಗೊಳ್ಳಬೇಕು.
ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಂದ ಸಹಾಯಧನ ರೂಪದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳ ಖರೀದಿ ಯಲ್ಲಿನ ಭೃಷ್ಟಾಚಾರಗಳನ್ನು ತಕ್ಷಣ ನಿಲ್ಲಿಸಬೇಕು. ತೆಂಗಿನ ಕಾಯಿ ಕಿಲೋಗೆ 50/ರೂ., ಕಾಳುಮೆಣಸು ಕಿಲೋಗೆ 600ರೂ., ಮಲ್ಲಿಗೆ ಅಟ್ಟೆಗೆ 400ರೂ. ಕನಿಷ್ಟದರ ನಿಗದಿಗೊಳಿಸಬೇಕು.
ಕೃಷಿಗೆ ಸಂಬಂಧಿತ ಚಟುವಟಿಕೆಗಳಲ್ಲಿ ಅಪಘಾತ ಸಂಭವಿಸಿದಾಗ 5 ಲಕ್ಷ ರೂ. ಪರಿಹಾರಧನ ನೀಡಬೇಕು. ಜಾರಿಗೆ ಬರುತ್ತಿರುವ ಕೃಷಿ ಪಿಂಚಣಿ ಯೋಜನೆ ಪ್ರಸ್ತುತ 60 ವರ್ಷ ವಯಸ್ಸು ದಾಟಿದವರಿಗೂ ಅನ್ವಯಿಸಿ ತಿಂಗಳ ಪಿಂಚಣಿ ನೀಡಬೇಕು. ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸ ಬೇಕು. ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೆ ನರ್ಮ್ ಬಸ್ಸುಗಳ ಸೇವೆಯನ್ನು ವಿಸ್ತರಿಸಿ, ಗ್ರಾಮಾಂತರ ಭಾಗದ ಕೃಷಿಕರು, ಜನಸಾಮಾನ್ಯರಿಗೆ ಪ್ರಯೊೀಜನ ದೊರಕುವಂತೆ ಮಾಡಬೇಕು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಸಮಸ್ತ ಕೃಷಿಕ ಬಾಂಧವರು ಒಗ್ಗಟ್ಟಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಕೃಷಿಕ ಸಂಘ ಪ್ರಕಟಣೆಯಲ್ಲಿ ವಿನಂತಿಸಿದೆ.