ಡಿ.18: ಬಂಟಕಲ್ಲಿನಲ್ಲಿ ಸಾವಯವ ಕೃಷಿ ಮಾಹಿತಿ ಶಿಬಿರ
ಉಡುಪಿ, ಡಿ.17: ಉಡುಪಿ ಜಿಲ್ಲಾ ಕೃಷಿಕ ಸಂಘ ಕಾಪು ವಲಯ ಸಮಿತಿ ವೈಜ್ಞಾನಿಕ ಸಾವಯವ ಕೃಷಿ ಮಾಹಿತಿ ಶಿಬಿರವೊಂದನ್ನು ಡಿ.18ರ ಬುಧವಾರ ಸಂಜೆ 4:30ಕ್ಕೆ ಬಂಟಕಲ್ಲು ಹೇರೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ನಡೆಯಲಿದೆ. ಜಯ ಶೆಟ್ಟಿ ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ಶೆಟ್ಟಿ ವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಪ್ರಶಸ್ತಿ ವಿಜೇತ ಕೃಷಿಕ ರಾಘವೇಂದ್ರ ನಾಯಕ್ ಕಲ್ಲೊಟ್ಟು ಭಾಗವಹಿಸಲಿದ್ದಾರೆ.
ಲಾಭದಾಯಕವಾಗಿ ಕಡಿಮೆ ಖರ್ಚಿನಲ್ಲಿ ತೆಂಗು, ಅಡಿಕೆ, ಬಾಳೆ, ಕಾಳು ಮೆಣಸು, ತರಕಾರಿ, ಮಲ್ಲಿಗೆ, ಭತ್ತ ಬೇಸಾಯ ಕೃಷಿ ಮಾಡುವ ಕ್ರಮಗಳು, ಅವುಗಳ ನಾಟಿ, ಆರೈಕೆ, ಕೀಟ-ರೋಗ ಬಾಧೆಗಳ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಸಂಘ ತಿಳಿಸಿದೆ.
ಗುರುವಾರ ಮುಡೂರಿನಲ್ಲಿ: ಜಿಲ್ಲಾ ಕೃಷಿಕ ಸಂಘ ಮುಡೂರು, ಕನ್ನಾರು, ಸಾಸ್ತಾವು, ಬೆನೆಗಲ್ ಸಂಯುಕ್ತ ಗ್ರಾಮ ಸಮಿತಿ ವೈಜ್ಞಾನಿಕವಾಗಿ ಮಲ್ಲಿಗೆ ಮತ್ತು ತರಕಾರಿ ಕೃಷಿಯ ಕುರಿತು ಮಾಹಿತಿ ಸಭೆಯೊಂದನ್ನು ಡಿ.19ರ ಗುರುವಾರ ಬೆಳಗ್ಗೆ 9 ಗಂಟೆಗೆ ಉಮಾಶಂಕರ ಶೆಟ್ಟಿ ಮುಡೂರು ಇವರ ಮನೆ ವಠಾರದಲ್ಲಿ ಆಯೋಜಿಸಿದೆ.
ಚೇರ್ಕಾಡಿ ಗ್ರಾಪಂ ಸದಸ್ಯ ಕಮಲಾಕ್ಷ ಹೆಬ್ಬಾರ್ ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮಾಶಂಕರ್ ಶೆಟ್ಟಿ ವಹಿಸಲಿದ್ದಾರೆ. ಕಡಿಮೆ ವೆಚ್ಚದಲ್ಲಿ ಲಾಭದಾಯಕವಾಗಿ ತರಕಾರಿ-ಮಲ್ಲಿಗೆ ಕೃಷಿ ಬೆಳೆಗಳ ವ್ಶೆಜ್ಞಾನಿಕ ನಾಟಿ, ನಿರ್ವಹಣೆ, ಕೀಟ-ರೋಗ ಬಾಧೆ ಹತೋಟಿ ಕ್ರಮಗಳು ಕುರಿತ ಸಭೆಯಲ್ಲಿ ಮಾಹಿತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.