ಮಂಗಳೂರಿನಲ್ಲಿ ಡಿ.20ರವರೆಗೆ ನಿಷೇಧಾಜ್ಞೆ: ಪೊಲೀಸ್ ಕಮಿಷನರ್
ಕೇಂದ್ರದ ಸಿಎಎ-ಎನ್ಆರ್ಸಿ ವಿರುದ್ಧ ಬಂದ್ ಹಿನ್ನೆಲೆ
![ಮಂಗಳೂರಿನಲ್ಲಿ ಡಿ.20ರವರೆಗೆ ನಿಷೇಧಾಜ್ಞೆ: ಪೊಲೀಸ್ ಕಮಿಷನರ್ ಮಂಗಳೂರಿನಲ್ಲಿ ಡಿ.20ರವರೆಗೆ ನಿಷೇಧಾಜ್ಞೆ: ಪೊಲೀಸ್ ಕಮಿಷನರ್](https://www.varthabharati.in/sites/default/files/images/articles/2019/12/18/224190-1576675803.jpeg)
ಮಂಗಳೂರು, ಡಿ.18: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ನಾಗರಿಕ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಜಾರಿಗೆ ವಿರೋಧಿಸಿ ಡಿ.19-20ರಂದು ವಿವಿಧ ಸಂಘ-ಸಂಸ್ಥೆ, ರಾಜಕೀಯ ಪಕ್ಷಗಳು ಪ್ರತಿಭಟನೆ ಹಮ್ಮಿಕೊಂಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿಆರ್ ಪಿಸಿ ಸೆಕ್ಷನ್ 144ರಂತೆ ಡಿ.18ರಂದು ರಾತ್ರಿ 9ರಿಂದ ಡಿ.20ರಂದು ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಹೊರಡಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಬುಧವಾರ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸರಕಾರವು ಇತ್ತೀಚೆಗೆ ಸಿಎಎ ಮತ್ತು ಎನ್ಆರ್ಸಿ ಕಾಯ್ದೆ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ದೆಹಲಿಯ ಜಾಮೀಯಾ ಯುವನಿವರ್ಸಿಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿದ್ದರಿಂದ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಇದನ್ನು ವಿರೋಧಿಸಿ ಮಂಗಳೂರು ನಗರದಲ್ಲಿ ಇತ್ತೀಚೆಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದವರು ಅನುಮತಿ ಪಡೆಯದೆ ಏಕಾಏಕಿ ರಸ್ತೆ ಮಧ್ಯೆ ಪ್ರತಿಭಟಿಸಿ ವಾಹನ ಸಂಚಾರ-ಕಾನೂನು ವ್ಯವಸ್ಥೆಗೆ ಧಕ್ಕೆ ತಂದಿದ್ದರು. ಅಲ್ಲದೆ, ಸಿಎಎ ಮತ್ತು ಎನ್ಆರ್ಸಿ ಕಾಯ್ದೆ ವಿರುದ್ಧ ಪ್ರತಿಭಟಿಸಲು ಎಲ್ಲ ಸಂಘಟನೆಗಳು ಭಾಗಿಯಾಗುವಂತೆ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮದಿಂದ ನಿಷೇಧಾಜ್ಞೆ ಹೊರಡಿಸಿದೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಡಿ.19ಮತ್ತು 20ರಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಅಖಿಲ ಭಾರತ ಬಂದ್ಗೆ ಕರೆ ನೀಡಿರುವ ಬಗ್ಗೆ ಮಾಹಿತಿ ಇದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಘಟಕದ ವ್ಯಾಪ್ತಿಯು ಅತಿಸೂಕ್ಷ್ಮ ಪ್ರದೇಶವಾಗಿದೆ. ಮೆರವಣಿಗೆ, ಪ್ರತಿಭಟನೆ, ಕಾರ್ಯಕ್ರಮ ನಡೆಸಿದ್ದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಪುನರುಚ್ಚರಿಸಿದರು.
ಯಾವುದಕ್ಕೆಲ್ಲ ನಿಷೇಧ?
ನಿಷೇಧಾಜ್ಞೆ ಸಮಯದಲ್ಲಿ ಶಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲು/ಲಾಠಿ ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ. ಪಟಾಕಿ ಸಿಡಿಸುವುದು, ಯಾವುದೇ ಸ್ಫೋಟಕ ಒಯ್ಯುವುದನ್ನು ನಿಷೇಧಿಸಲಾಗಿದೆ.
ಯಾವುದೇ ವಿಜಯೋತ್ಸವ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭ ಏರ್ಪಡಿಸುವಂತಿಲ್ಲ. ಕಲ್ಲು ಎಸೆಯುವುದು, ವೇಗದಿಂದ ಒಗೆಯುವ ಸಾಧನ/ಉಪಕರಣ ಶೇಖರಿಸುವುದು, ರವಾನೆ ಮಾಡುವುದನ್ನು ನಿಷೇಧಿಸಿದೆ.
ವ್ಯಕ್ತಿಗಳ ಅಥವಾ ಅವರ ಆಕೃತಿ/ಪ್ರತಿಕೃತಿ ಪ್ರದರ್ಶನ ಮಾಡುವಂತಿಲ್ಲ. ಅಪರಾಧ ಮಾಡಲು ಪ್ರಚೋದಿಸುವ ಬಹಿರಂಗ ಘೋಷಣೆ ಕೂಗುವುದು, ಹಾಡುವುದು, ಆವೇಷ ಭಾಷಣ ಮಾಡುವಂತಿಲ್ಲ. ಚಿತ್ರ, ಸಂಕೇತ, ಭಿತ್ತಿಪತ್ರ ಅಥವಾ ಇತರ ಯಾವುದೇ ವಸ್ತು/ಪದಾರ್ಥ ತಯಾರಿಸುವುದು, ಪ್ರದರ್ಶಿಸುವುದು, ಪ್ರಸಾರ ಮಾಡುವಂತಿಲ್ಲ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಆದೇಶದಲ್ಲಿ ತಿಳಿಸಿದ್ದಾರೆ.