ಅದ್ದೂರಿಯಾಗಿ ನಡೆದ ಸಚಿವ ಶ್ರೀರಾಮುಲು ಪುತ್ರಿ ವಿವಾಹ ನಿಶ್ಚಿತಾರ್ಥ
ಬೆಂಗಳೂರು, ಡಿ. 18: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಪುತ್ರಿ ವಿವಾಹ ನಿಶ್ಚಿತಾರ್ಥ ಹೈದರಾಬಾದ್ ಮೂಲದ ಉದ್ಯಮಿ ರವಿಕುಮಾರ್ ಅವರ ಪುತ್ರ ಲಲಿತ್ ಕುಮಾರ್ ಅವರೊಂದಿಗೆ ನಗರದ ಖಾಸಗಿ ಹೊಟೇಲ್ನಲ್ಲಿ ಅದ್ದೂರಿಯಾಗಿ ನಡೆಯಿತು.
ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಗಾಲಿ ಜನಾರ್ದನ ರೆಡ್ಡಿ, ಶಾಸಕರಾದ ಆನಂದ್ ಸಿಂಗ್, ರಾಜೂಗೌಡ, ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಹಲವು ಮುಖಂಡರು ನೂತನ ಜೋಡಿಗೆ ಶುಭ ಕೋರಿದರು.
ರಕ್ಷಿತಾ ಹಾಗೂ ಲಲಿತ್ ಲಂಡನ್ನಲ್ಲಿ ಎಂಬಿಎ ಓದಿದ್ದು, ಅಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಇಬ್ಬರಿಗೂ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಸಮಯ ಕಳೆದಂತೆ ಆ ಸ್ನೇಹ ಪ್ರೀತಿಗೆ ತಿರುಗಿತ್ತು. ತಮ್ಮ ಪ್ರೀತಿಯ ಬಗ್ಗೆ ರಕ್ಷಿತಾ ಹಾಗೂ ಲಲಿತ್ ಮನೆಯವರ ಬಳಿ ಹೇಳಿದಾಗ ಪೋಷಕರು ಅವರಿಬ್ಬರ ಪ್ರೀತಿ ಒಪ್ಪಿಕೊಂಡಿದ್ದು, ಎಲ್ಲರ ಸಮುಖದಲ್ಲಿ ನಿಶ್ಚಿತಾರ್ಥ ನಡೆಸಲಾಯಿತು.
ರಾಮುಲು ದಂಪತಿಗೆ ಒಟ್ಟು ನಾಲ್ವರು ಮಕ್ಕಳು. ರಕ್ಷಿತಾ, ದೀಕ್ಷಿತಾ, ಅಂಕಿತಾ ಹಾಗೂ ಧನುಷ್. ಆ ಪೈಕಿ ರಕ್ಷಿತಾ ಪ್ರಥಮ ಪುತ್ರಿಯಾಗಿದ್ದು, ಮಗಳ ನಿಶ್ಚಿತಾರ್ಥವನ್ನು ಆಕೆ ಇಷ್ಟಪಟ್ಟ ಹುಡುಗನ ಜೊತೆಗೆ ಶ್ರೀರಾಮುಲು ಅದ್ದೂರಿಯಾಗಿ ನೆರವೇರಿಸಿದ್ದಾರೆ ಎಂದು ಗೊತ್ತಾಗಿದೆ.