ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಸಿಎಂ ಯಡಿಯೂರಪ್ಪ
ಟೆಂಡರ್ ಶ್ಯೂರ್ ರಸ್ತೆ ಲೋಕಾರ್ಪಣೆ

ಹುಬ್ಬಳ್ಳಿ, ಡಿ.18: ರಾಜ್ಯದ ಆರ್ಥಿಕ ಸ್ಥಿತಿಗಳನ್ನು ಅನುಸರಿಸಿ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಬುಧವಾರ ಲೋಕೋಪಯೋಗಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹುಬ್ಬಳ್ಳಿ ನಗರದ ರಾಜ್ಯ ಹೆದ್ದಾರಿ - 73ರ ಶ್ರೀ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನಕೆರೆಯವರೆಗೆ ನಿರ್ಮಿಸಲಾಗಿರುವ ಟೆಂಡರ್ ಶ್ಯೂರ್ ರಸ್ತೆಯ ಲೋಕಾರ್ಪಣೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ದೂರ ದೃಷ್ಟಿಯೊಂದಿಗೆ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ ಮಾಡಲಾಗಿದೆ. ರಾಜ್ಯದ ಇತರ ನಗರಗಳಲ್ಲೂ ಈ ಮಾದರಿಯಲ್ಲಿ ರಸ್ತೆ ನಿರ್ಮಿಸಲಾಗುವುದು. ನೃಪತುಂಗ ಬೆಟ್ಟದಲ್ಲಿ ಒಳ್ಳೆಯ ಪರಿಸರವಿದೆ, ಸರಕಾರದಿಂದ ಅದನ್ನು ಅಭಿವೃದ್ಧಿ ಪಡಿಸಲಾಗಿದೆ. ವೈಯಕ್ತಿಕವಾಗಿ ನೃಪತುಂಗ ಬೆಟ್ಟ ನನ್ನ ನೆಚ್ಚಿನ ತಾಣವಾಗಿದೆ ಎಂದರು.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರು ದೇಶದ ಹೆದ್ದಾರಿ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ಹಣ ಮೀಸಲಿರಿಸಿರುವುದಾಗಿ ತಿಳಿಸಿದ್ದಾರೆ. ಈ ಅನುದಾನದಲ್ಲಿ ರಾಜ್ಯದ ಹೆದ್ದಾರಿಗಳನ್ನು ಸಹ ಅಭಿವೃದ್ಧಿ ಪಡಿಸಲಾಗುವುದು. 900 ಕೋಟಿ ರೂ.ವೆಚ್ಚದಲ್ಲಿ ಹುಬ್ಬಳ್ಳಿ ಧಾರವಾಡ ನಡುವೆ ಬಿಆರ್ಟಿಎಸ್ ರಸ್ತೆ ನಿರ್ಮಿಸಿರುವುದರಿಂದ ಕಡಿಮೆ ಸಮಯದಲ್ಲಿ ಜನರು ಅವಳಿ ನಗರದ ನಡುವೆ ಪ್ರಯಾಣಿಸಲು ಸಾಧ್ಯವಾಗಿದೆ ಎಂದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ದೊಡ್ಡನಗರಗಳಲ್ಲಿ ಇಂತಹ ರಸ್ತೆಗಳ ನಿರ್ಮಾಣದ ಅವಶ್ಯಕತೆ ಇದೆ. ಸರಕಾರ ಅಧಿಕಾರಕ್ಕೆ ಬಂದು 4 ತಿಂಗಳಾಗಿದೆ. ರಾಜ್ಯದಲ್ಲಿ ನೆರೆ ಬಂದಕಾರಣ 8 ಸಾವಿರ ಕೋಟಿ ರೂ.ಲೋಕೋಪಯೋಗಿ ಆಸ್ತಿ ಹಾನಿಯಾಗಿದೆ. ಇವುಗಳನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ. ನೆರೆಯಿಂದ ರಾಜ್ಯಕ್ಕೆ ಆರ್ಥಿಕವಾಗಿ 20 ಸಾವಿರ ಕೋಟಿ ಹೆಚ್ಚಿನ ಹೊರೆ ಬಿದ್ದಿದೆ. ಲೋಕೋಪಯೋಗಿ ಇಲಾಖೆಯಿಂದ ಧಾರವಾಡ ವಲಯದಲ್ಲಿ ಪ್ರತಿವರ್ಷ 200 ಕೋಟಿ ಕಾಮಗಾರಿಗಳನ್ನು ಕೈಕೊಳ್ಳಲಾಗುತ್ತಿದೆ. ರಾಜ್ಯಾದ್ಯಂತ 3874 ಕೋಟಿ ಕಾಮಗಾರಿಗಳನ್ನು ಇಲಾಖೆಯಿಂದ ಕೆಲಸ ನಿರ್ವಹಿಸಲಾಗುತ್ತಿದೆ. ಮುಖ್ಯಮಂತ್ರಿಗಳು ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.
ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, 2012ರಲ್ಲಿ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿತ್ತು. ವಿದೇಶಿ ಮಾದರಿಯಲ್ಲಿ ರಸ್ತೆಗಳನ್ನು ನಿರ್ಮಿಸಿ, ವಿದ್ಯುತ್, ನೀರು, ಕೇಬಲ್, ಗ್ಯಾಸ್, ಯುಜಿಡಿ ಸೇರಿದಂತೆ ಇತರೆ ಬಳಕೆಯನ್ನು ಗಮನದಲ್ಲಿ ಇರಿಸಿಕೊಂಡು ಮೊದಲೇ ಯೋಜಿಸಿ ರಸ್ತೆ ನಿರ್ಮಿಸಲಾಗಿದೆ. ಅಂದು ಲೋಕೋಪಯೋಗಿ ಸಚಿವರಾಗಿದ್ದ ಎಚ್.ಸಿ.ಮಹಾದೇವಪ್ಪನವರು ರಸ್ತೆ ನಿರ್ಮಾಣಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿ 34 ಕೋಟಿ ಹಣ ಮಂಜೂರು ಮಾಡಿದರು. ಜನ ಅರ್ಬನ್ ಫೌಂಡೇಷನ್ನ ಸ್ವಾತಿ ರಾಮನಾಥನ್ ಅವರು ಉಚಿತವಾಗಿ ರಸ್ತೆಯ ನೀಲನಕ್ಷೆ ಹಾಗೂ ವಿನ್ಯಾಸ ಮಾಡಿಕೊಟ್ಟಿದ್ದಾರೆ. ಒಟ್ಟು 2 ಕಿ.ಮೀ. ಟೆಂಡರ್ ಶ್ಯೂರ್ ರಸ್ತೆಯನ್ನು 46 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.
ಹುಬ್ಬಳ್ಳಿ ಧಾರವಾಡ ನಗರದ ರಸ್ತೆಗಳ ಕಾಂಕ್ರೀಟಿಕರಣಕ್ಕಾಗಿ 460 ಕೋಟಿ ಹಣ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ರಸ್ತೆಗಳ ನಿರ್ಮಾಣಕ್ಕೆ ಟೆಂಡರ್ ನೀಡಲಾಗುವುದು. ಪಾಲಿಕೆ ನೌಕರರ ಪಿಂಚಣಿ ಬಾಕಿ ಹಣಕ್ಕೆ ರಾಜ್ಯ ಸರಕಾರದಿಂದ 100 ಕೋಟಿ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ 50 ಕೋಟಿ ಹಾಗೂ ಮಾರ್ಚ್ ಅಂತ್ಯದ ವೇಳೆಗೆ 50 ಕೋಟಿ ಹಣ ಬಿಡುಗಡೆ ಮಾಡಲಾಗುವುದು ಎಂದರು.







