ಸಿಎಎ ಧರ್ಮದ ಆಧಾರದಲ್ಲಿ ತಾರತಮ್ಯ ಕಾನೂನುಬದ್ಧಗೊಳಿಸುವ ಕಾಯ್ದೆ
ಆ್ಯಮ್ನೆಸ್ಟಿ ಇಂಡಿಯಾ
ಹೊಸದಿಲ್ಲಿ,ಡಿ.19: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಪ್ರತಿಭಟನಾನಿರತರ ಮೇಲಿನ ದಾಳಿಗಳನ್ನು ಗುರುವಾರ ಖಂಡಿಸಿರುವ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ,ಪ್ರತಿಭಟನೆಗಳನ್ನು ನಿಲ್ಲಿಸಲು ವಿವಿಧ ರಾಜ್ಯ ಸರಕಾರಗಳು ಪ್ರತಿಭಟನಾಕಾರರನ್ನು ಬಂಧಿಸಿವೆ ಮತ್ತು ನಿಷೇಧಾಜ್ಞೆಗಳನ್ನು ಹೇರಿವೆ ಎಂದು ಬೆಟ್ಟು ಮಾಡಿದೆ.
ಸಿಎಎ ಅನ್ನು ಧರ್ಮದ ಆಧಾರದಲ್ಲಿ ತಾರತಮ್ಯವನ್ನು ಕಾನೂನುಬದ್ಧಗೊಳಿಸುವ ‘ಪರಮತ ವೈರಿ ಕಾಯ್ದೆ’ಎಂದು ಬಣ್ಣಿಸಿದ ಆಮ್ನೆಸ್ಟಿ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಅವಿನಾಶ್ ಕುಮಾರ್ ಅವರು,ದೇಶದ ಜನರು ಈ ಕಾನೂನಿನ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಗೊಳಿಸುವ ಹಕ್ಕನ್ನು ಹೊಂದಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಸಾರ್ವಜನಿಕ ಚರ್ಚೆಗೂ ಅವಕಾಶ ನೀಡುತ್ತದೆ. ಆದರೆ ಈ ಹಕ್ಕನ್ನು ಗೌರವಿಸುವ,ರಕ್ಷಿಸುವ ಮತ್ತು ಉತ್ತೇಜಿಸುವ ಬದಲು ದಿಲ್ಲಿಯ ಕೇಂದ್ರ ಸರಕಾರ ಮತ್ತು ವಿವಿಧ ರಾಜ್ಯ ಸರಕಾರಗಳು ದಮನಕಾರಿ ಕಾನೂನುಗಳನ್ನು ಬಳಸಿ ಪ್ರತಿಭಟನಾಕಾರರನ್ನು ನಿರ್ಬಂಧಿಸುತ್ತಿವೆ ಎಂದು ಹೇಳಿದರು.
ಅಂತರರಾಷ್ಟ್ರೀಯ ಕಾನೂನನ್ನು ಉಲ್ಲೇಖಿಸಿ ಶಾಂತಿಯುತ ಸಮಾವೇಶವು ಒಂದು ಹಕ್ಕು ಆಗಿದೆ ಎಂದು ಒತ್ತಿ ಹೇಳಿದ ಅವರು,ಶಾಂತಿಯುತ ಪ್ರತಿಭಟನೆಯು ಸಾರ್ವಜನಿಕ ಸ್ಥಳದ ಕಾನೂನುಬದ್ಧ ಬಳಕೆಯಾಗಿದೆ ಎನ್ನುವುದನ್ನು ದೇಶಾದ್ಯಂತದ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಶಾಂತಿಯುತ ಪ್ರತಿಭಟನೆಗಳಿಗೆ ಅನುಮತಿ ನಿರಾಕರಣೆಯು ಅಭಿವ್ಯಕ್ತಿ ಸ್ವಾತಂತ್ರಕ್ಕೆ ತಿರಸ್ಕಾರವಾಗಿದೆ ಮತ್ತು ಇದು ಅಪಾಯಕಾರಿಯಾಗಿದೆ ಎಂದರು.
ತಕ್ಷಣಕ್ಕೆ ಹಿಂಸಾಚಾರ ಅಥವಾ ಅರಾಜಕತೆಯ ಸಾಧ್ಯತೆಯಿದ್ದಾಗ ಮಾತ್ರ ಸಾರ್ವಜನಿಕ ಸುವ್ಯವಸ್ಥೆಯ ಆಧಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ನಿರ್ಬಂಧಿಸಬಹುದು ಎಂಬ ನ್ಯಾಯಾಲಯಗಳ ತೀರ್ಪನ್ನು ಅಧಿಕಾರಿಗಳಿಗೆ ನೆನಪಿಸಿದ ಕುಮಾರ,ಅಧಿಕಾರಿಗಳು ಪ್ರತಿಭಟನೆಯ ಅಪರಾಧೀಕರಣವನ್ನು ನಿಲ್ಲಿಸಬೇಕು,ಮುಕ್ತ ಸಮಾವೇಶದ ಮೇಲಿನ ಅನುಚಿತ ನಿರ್ಬಂಧವನ್ನು ಹಿಂದೆಗೆದುಕೊಳ್ಳಬೇಕು ಮತ್ತು ಎಲ್ಲ ಮಾನವ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಬೇಕು ಎಂದರು.