ಮಂಗಳೂರು, ಕಲಬುರಗಿ ಜನತೆ ‘ಕಂಡಲ್ಲಿ ಗುಂಡಿಕ್ಕುವ’ ಆತಂಕದಲ್ಲಿದ್ದಾರೆ: ಕುಮಾರಸ್ವಾಮಿ

ಬೆಂಗಳೂರು, ಡಿ. 19: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ಭುಗಿಲೇಳುತ್ತಿದೆ. ಪ್ರತಿಭಟನೆಕಾರರನ್ನು ಹತ್ತಿಕ್ಕಲು ಕೇಂದ್ರ-ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿದ್ದು, ದಮನಕಾರಿ ನೀತಿಯನ್ನು ಅನುಸರಿಸುತ್ತಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಿಷೇಧಾಜ್ಞೆ, ಕರ್ಫ್ಯೂ ಹೇರುವ ಮೂಲಕ ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಸಲಾಗುತ್ತಿದೆ. ಜನಸಾಮಾನ್ಯರು ಭಯ ಭೀತಿಯ ವಾತಾವರಣದಲ್ಲಿ ಬದುಕುವಂತಾಗಿದೆ. ರಾಜ್ಯದ ಮಂಗಳೂರು, ಕಲಬುರಗಿ ಸೇರಿದಂತೆ ದೇಶದ ಹಲವೆಡೆ ‘ಕಂಡಲ್ಲಿ ಗುಂಡಿಕ್ಕುವ’ ಆತಂಕದಲ್ಲಿ ಜನತೆ ಕಂಗಾಲಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಹಿಂಸಾತ್ಮಕ ಪ್ರತಿಭಟನೆ ಜನರ ಅಸ್ತ್ರ. ಶಾಂತಿಯುತ ಪ್ರತಿಭಟನೆಯನ್ನೂ ಅರಗಿಸಿಕೊಳ್ಳಲಾಗದ ಕೇಂದ್ರ-ರಾಜ್ಯ ಸರಕಾರಗಳು ಪೊಲೀಸ್ ಬಲಪ್ರಯೋಗದ ಮೂಲಕ ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸತೊಡಗಿರುವುದು ದೊಡ್ಡ ದುರಂತ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕೇಂದ್ರ-ರಾಜ್ಯ ಸರಕಾರಗಳು ಪ್ರತಿಭಟನೆಗೆ ನಿರ್ಬಂಧ ಹೇರ ತೊಡಗಿರುವುದು ತುರ್ತುಪರಿಸ್ಥಿತಿಯ ಮುನ್ಸೂಚನೆ ಎಂಬಂತಿದೆ ಎಂದು ಕುಮಾರಸ್ವಾಮಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.







