ದಿಲ್ಲಿಯ ಕೆಲವು ಭಾಗಗಳಲ್ಲಿ ಮೊಬೈಲ್ ಸಂಪರ್ಕ ಸ್ಥಗಿತ
ಹೊಸದಿಲ್ಲಿ, ಡಿ. 19: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹೊಸದಿಲ್ಲಿಯಲ್ಲಿ ಮತ್ತಷ್ಟು ತೀವ್ರಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಪ್ರದೇಶಗಳಲ್ಲಿ ಧ್ವನಿ, ದತ್ತಾಂಶ ಹಾಗೂ ಅಂತರ್ಜಾಲ ಸೇವೆ ಸ್ಥಗಿತಗೊಳಿಸುವಂತೆ ದಿಲ್ಲಿ ಸರಕಾರ ಮೊಬೈಲ್ ಸಂಪರ್ಕ ಸೇವೆ ಪೂರೈಕೆದಾರರಿಗೆ ಸೂಚಿಸಿದೆ.
ದಿಲ್ಲಿಯ ನಿರ್ದಿಷ್ಟ ಪ್ರದೇಶಗಳಲ್ಲಿ ಧ್ವನಿ, ಎಸ್ಎಂಎಸ್ ಹಾಗೂ ದತ್ತಾಂಶಗಳನ್ನು ಸ್ಥಗಿತಗೊಳಿಸುವಂತೆ ಸರಕಾರಿ ಅಧಿಕಾರಿಗಳಿಂದ ಸ್ವೀಕರಿಸಿದ ಸೂಚನೆಯನ್ನು ನಾವು ಅನುಸರಿಸುತ್ತಿದ್ದೇವೆ. ರದ್ದು ಆದೇಶ ಹಿಂದೆಗೆದ ಬಳಿಕ, ನಮ್ಮ ಸೇವೆ ಎಂದಿನಂತೆ ಮುಂದುವರಿಯಲಿದೆ. ಅಡಚಣೆಗಾಗಿ ಕ್ಷಮಿಸಿ ಎಂದು ಏರ್ಟೆಲ್ ಹೇಳಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದ್ದು, ಮುಂಬೈ ಹಾಗೂ ದಿಲ್ಲಿ ಪ್ರತಿಭಟನೆಯ ಕೇಂದ್ರವಾಗಿದೆ. ನಾಲ್ಕರಿಂದ ಹೆಚ್ಚು ಜನರು ಗುಂಪು ಸೇರದಂತೆ ಕೆಂಪು ಕೋಟೆ ಸುತ್ತಮುತ್ತ ಪ್ರದೇಶಗಳಲ್ಲಿ ದಿಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Next Story