ಮಂಗಳೂರು: ಪೊಲೀಸ್ ಗುಂಡಿಗೆ ಬಲಿಯಾದ ಇಬ್ಬರ ಅಂತ್ಯಸಂಸ್ಕಾರ
ಶಾಂತಿಯುತ ಮೆರವಣಿಗೆ
![ಮಂಗಳೂರು: ಪೊಲೀಸ್ ಗುಂಡಿಗೆ ಬಲಿಯಾದ ಇಬ್ಬರ ಅಂತ್ಯಸಂಸ್ಕಾರ ಮಂಗಳೂರು: ಪೊಲೀಸ್ ಗುಂಡಿಗೆ ಬಲಿಯಾದ ಇಬ್ಬರ ಅಂತ್ಯಸಂಸ್ಕಾರ](https://www.varthabharati.in/sites/default/files/images/articles/2019/12/20/224441-1576848914.jpg)
ಮಂಗಳೂರು, ಡಿ. 20: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಗುರುವಾರ ನಡೆದ ಘರ್ಷಣೆಯ ಸಂದರ್ಭ ಗುಂಡೇಟಿಗೆ ಬಲಿಯಾದ ಇಬ್ಬರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನಡೆಸಲಾಯಿತು.
ಬಂದರ್ ಕಂದುಕದ ಅಬ್ದುಲ್ ಜಲೀಲ್ರ ಮೃತದೇಹವನ್ನು ಬಂದರ್ ಝೀನತ್ ಬಕ್ಷ್ (ಕೇಂದ್ರ ಜುಮಾ ಮಸ್ಜಿದ್) ಮತ್ತು ಕುದ್ರೋಳಿಯ ನೌಶಿನ್ರ ಮೃತದೇಹವನ್ನು ಕುದ್ರೋಳಿ ಜುಮಾ ಮಸ್ಜಿದ್ನಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ದಫನ ಮಾಡಲಾಯಿತು.
ಹೈಲ್ಯಾಂಡ್ ಆಸ್ಪತ್ರೆಯಿಂದ ಎರಡೂ ಮೃತದೇಹವನ್ನು ಮುಂಜಾನೆ ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದು ಅಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮತ್ತು ಮಂಗಳೂರು ತಹಶೀಲ್ದಾರ್ ಗುರು ಪ್ರಸಾದ್ ಸಮ್ಮುಖ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಧ್ಯಾಹ್ನ ಸುಮಾರು 2:15ರ ವೇಳೆಗೆ ಯುನಿಟಿ ಆಸ್ಪತ್ರೆ ಸಮೀಪದ ಮಸ್ಜಿದ್ ಇಹ್ಸಾನ್ನಲ್ಲಿ ಮೃತದೇಹದ ಸ್ನಾನ ಮಾಡಿಸಿ 3:30ರ ಸುಮಾರಿಗೆ ಬಂದರು ಕಂದುಕ ಮತ್ತು ಕುದ್ರೋಳಿಗೆ ಕೊಂಡೊಯ್ಯಲಾಯಿತು.
ಜಲೀಲ್ರ ಮೃತದೇಹವನ್ನು ಸಂಜೆ 4:45ಕ್ಕೆ ಮತ್ತು ನೌಶಿನ್ನ ಮೃತದೇಹವನ್ನು 5 ಗಂಟೆಗೆ ದಫನ ಮಾಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಕಡೆಯಲ್ಲೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಂದರ್ಭ ಮಾಜಿ ಸಚಿವರಾದ ಯು.ಟಿ.ಖಾದರ್, ರಮಾನಾಥ ರೈ, ಮಾಜಿ ಶಾಸಕರಾದ ಜೆ.ಆರ್. ಲೋಬೊ ಹಾಗು ಇತರರು ಈ ಸಂದರ್ಭ ಇದ್ದರು.