ಮಂಗಳೂರು ಗೋಲಿಬಾರ್, ಸಿಎಎ, ಎನ್ಆರ್ಸಿ ವಿರೋಧಿಸಿ ಬೆಂಗಳೂರಿನಲ್ಲಿ ಡಿ.23ರಂದು ಪ್ರತಿಭಟನೆಗೆ ಕರೆ
ಬೆಂಗಳೂರು, ಡಿ.21: ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಪ್ರಕ್ರಿಯೆ ಹಾಗೂ ಮಂಗಳೂರಿನಲ್ಲಿ ಯುವಕರಿಬ್ಬರ ಹತ್ಯೆ ಖಂಡಿಸಿ ಸೋಮವಾರ (ಡಿ.23) ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಸ್ಲಿಮ್ ಸಂಘಟನೆಗಳು ಕರೆ ನೀಡಿವೆ.
ಸೋಮವಾರ ಇಲ್ಲಿನ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕೂ ಮೊದಲು ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆಗಳ ಮೂಲಕ, ಪ್ರತಿಭಟನಾ ಸ್ಥಳಕ್ಕೆ ಜಮಾಯಿಸಲು ಹಲವು ಸಂಘಗಳು ನಿರ್ಧರಿಸಿವೆ.
ಮುಸ್ಲಿಮ್ ಸಮುದಾಯದ ಸಂಘ ಸಂಸ್ಥೆಗಳು, ಜಮಾಅತ್ಗಳು, ಸಮಿತಿಗಳನ್ನು ಒಳಗೊಂಡ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವಂತೆ ಅನ್ಯಧರ್ಮೀಯ ಸಂಘ ಸಂಸ್ಥೆಗಳ ಮುಖಂಡರಿಗೂ ಆಹ್ವಾನ ನೀಡಲಾಗಿದೆ. ಸೋಮವಾರ ರಾಜ್ಯದ ಇತರ ಜಿಲ್ಲಾ ಕೇಂದ್ರಗಳಲ್ಲೂ ಮುಸ್ಲಿಮರು ಎರಡು ಗಂಟೆಗಳ ಕಾಲ ತಮ್ಮ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಈ ಶಾಂತಿಯು ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ಸಭೆಯಲ್ಲಿ ಮನವಿ ಮಾಡಲಾಗಿದೆ.
ಸ್ವಯಂಪ್ರೇರಿತ ಬಂದ್?
ಶಾಲಾ-ಕಾಲೇಜು, ಕಚೇರಿಗಳಿಗೆ ರಜೆ ಹಾಕಬೇಕು ಮತ್ತು ಅಂಗಡಿಗಳನ್ನು ಸ್ವಯಂಪ್ರೇರಿತ ಬಂದ್ ಮಾಡಿ, ಹೋರಾಟಗಳಿಗೆ ಪಾಲ್ಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ.
ನಗರದೆಲ್ಲೆಡೆ ಬಿಗಿ ಭದ್ರತೆ
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆ ಬೆಂಗಳೂರಿನ ಪ್ರತಿಭಟನಾ ಸ್ಥಳಗಳಾದ ಪುರಭವನ, ಮೈಸೂರು ಬ್ಯಾಂಕ್, ಶಿವಾಜಿನಗರದಲ್ಲಿ ಪೊಲೀಸ್ ಭದ್ರತೆ ಮುಂದುವರೆದಿದೆ.
ನಗರದ ಪುರಭವನ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಕಳೆದೆರಡು ದಿನಗಳಿಂದ ಇಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿ ಸಿಎಎ ಕಾಯ್ದೆ ವಿರೋಧಿಸಿದ್ದರಿಂದ ಪೊಲೀಸ್ ಭದ್ರತೆ ಮುಂದುವರೆಸಿ ಮೂರು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಮುಸ್ಲಿಮ್ ಮುಖಂಡರೊಂದಿಗೆ ಸಭೆ
ನಗರದ ಮಡಿವಾಳ, ಚಿನ್ನಯ್ಯನಪಾಳ್ಯ, ಮಂಗನಪಾಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ಮುಸ್ಲಿಮ್ ಮುಖಂಡರೊಂದಿಗೆ ಪೊಲೀಸರು ಸಭೆ ನಡೆಸಿ, ಪ್ರತಿಭಟನೆ ಸಂಬಂಧ ಮಾಹಿತಿ ಪಡೆದರು.
ಗಮನ ಸೆಳೆದ ಮೌನ ಪ್ರತಿಭಟನೆ
ಎನ್ಆರ್ಸಿ, ಸಿಎಎ ವಿರೋಧಿಸಿ ದೇಶದಲ್ಲೆಡೆ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಇಲ್ಲಿನ ಬನ್ನೇರುಘಟ್ಟ ಮುಖ್ಯ ರಸ್ತೆಯ ಐಐಎಂಬಿ ಕಾಲೇಜಿನ ವಿದ್ಯಾರ್ಥಿಗಳು ವೌನವಾಗಿ ಪ್ರತಿಭಟನೆ ನಡೆಸಿದರು.
ಕಾಲೇಜು ಆವರಣದಲ್ಲಿ ನಿಷೇಧಾಜ್ಞೆ ಜಾರಿಯಾದ ಕಾರಣ, ಒಬ್ಬೊಬ್ಬರಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಬಾಗಿಲಿನಿಂದ ಹೊರ ಬಂದು, ಪಾದರಕ್ಷೆಗಳನ್ನ ಆಚೆಗೆ ಜೋಡಿಸಿ ಖಾಲಿ ಹಾಳೆಯೊಂದನ್ನು ಇಟ್ಟು ಮೌನವಾಗಿಯೇ ಕಾಯ್ದೆಯನ್ನು ವಿರೋಧಿಸಿದರು.
ಇಂದು ಸತ್ಯಾಗ್ರಹ
‘ರಾಷ್ಟ್ರೀಯ ಏಕತೆಗಾಗಿ ಸತ್ಯಾಗ್ರಹ’ ಘೋಷಣೆಯೊಂದಿಗೆ ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ಗಳನ್ನು ತಿರಸ್ಕರಿಸುವಂತೆ ಒತ್ತಾಯಿಸಿ ರವಿವಾರ(ಡಿ.22) ನಗರದ ಮಿಲ್ಲರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ.