ನೂತನ ಪೌರತ್ವ ಕಾಯ್ದೆಯಲ್ಲಿ ಮುಸ್ಲಿಮರನ್ನೂ ಸೇರಿಸಬೇಕು: ಬಿಜೆಪಿ ಮಿತ್ರಪಕ್ಷ ಅಕಾಲಿ ದಳ ಆಗ್ರಹ
ಪಟಿಯಾಳಾ (ಪಂಜಾಬ),ಡಿ.21: ನೂತನ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತರುವ ಮೂಲಕ ಮುಸ್ಲಿಮರನ್ನೂ ಕಾಯ್ದೆಯ ವ್ಯಾಪ್ತಿಗೊಳಪಡಿಸಬೇಕು ಎಂದು ಶನಿವಾರ ಕೇಂದ್ರ ಸರಕಾರಕ್ಕೆ ಆಗ್ರಹಿಸಿರುವ ಬಿಜೆಪಿಯ ಮಿತ್ರಪಕ್ಷ ಅಕಾಲಿ ದಳವು, ಧರ್ಮದ ಆಧಾರದಲ್ಲಿ ಯಾರನ್ನೂ ಕಾಯ್ದೆಯಿಂದ ಹೊರಗಿರಿಸಬಾರದು ಎಂದು ಹೇಳಿದೆ.
ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅಕಾಲಿ ದಳದ ಅಧ್ಯಕ್ಷ ಸುಖಬೀರ ಸಿಂಗ್ ಬಾದಲ್ ಅವರು,‘ನಾನು ಪಕ್ಷದ ಪರವಾಗಿ ಮಾತನಾಡುತ್ತಿದ್ದೆನೆ ಮತ್ತು ಭಾರತ ಸರಕಾರವು ಪೌರತ್ವ ಕಾಯ್ದೆಯಲ್ಲಿ ಮುಸ್ಲಿಮರನ್ನು ಸೇರಿಸಬೇಕು ಮತ್ತು ಅದಕ್ಕಾಗಿ ತಿದ್ದುಪಡಿಯನ್ನು ತರಬೇಕು ಎನ್ನುವುದು ಪಕ್ಷದ ಸ್ಪಷ್ಟವಾದ ಅಭಿಪ್ರಾಯವಾಗಿದೆ. ಏಕೆಂದರೆ ಜನತೆ ಮತ್ತು ದೇಶವೂ ಇದನ್ನೇ ಬಯಸುತ್ತಿದೆ ’ಎಂದು ಹೇಳಿದರು.
“ನಮ್ಮ ದೇಶದಲ್ಲಿ ಎಲ್ಲ ಧರ್ಮಗಳ ಜನರೂ ವಾಸವಾಗಿದ್ದಾರೆ ಮತ್ತು ಅವರೆಲ್ಲರೂ ಒಗ್ಗಟ್ಟಿನಿಂದಿರುವುದು ನಮ್ಮ ಶಕ್ತಿಯಾಗಿದೆ. ಅವರನ್ನೇಕೆ ನಾವು ಕಾಯ್ದೆಯಿಂದ ಹೊರಗಿಡಬೇಕು?, ಭಾರತ ಸರಕಾರವು ಅವರನ್ನೂ ಕಾಯ್ದೆಯ ವ್ಯಾಪ್ತಿಯಲ್ಲಿ ಸೇರಿಸಬೇಕು. ಧರ್ಮದ ಆಧಾರದಲ್ಲಿ ಯಾರನ್ನೂ ಹೊರಗಿಡುವುದು ಸಲ್ಲದು” ಎಂದ ಬಾದಲ್, “ನಮ್ಮ (ಸಿಖ್) ಗುರುಗಳು ಇತರ ಧರ್ಮಗಳ ಜನರಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ ಮತ್ತು ‘ಎಲ್ಲರ ಕಲ್ಯಾಣ’ ಎನ್ನುವುದನ್ನು ನಮ್ಮ ಧರ್ಮವು ನಮಗೆ ಬೋಧಿಸುತ್ತದೆ. ಮುಸ್ಲಿಮರನ್ನೂ ನೂತನ ಕಾಯ್ದೆಯಲ್ಲಿ ಸೇರಿಸುವಂತೆ ನಾವು ನಮ್ರವಾಗಿ ಕೋರುತ್ತಿದ್ದೇವೆ” ಎಂದರು.