ಕರೋಪಾಡಿ: ಬೈಕಿಗೆ ಟಿಪ್ಪರ್ ಢಿಕ್ಕಿ; ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ
![ಕರೋಪಾಡಿ: ಬೈಕಿಗೆ ಟಿಪ್ಪರ್ ಢಿಕ್ಕಿ; ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ ಕರೋಪಾಡಿ: ಬೈಕಿಗೆ ಟಿಪ್ಪರ್ ಢಿಕ್ಕಿ; ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ](https://www.varthabharati.in/sites/default/files/images/articles/2019/12/22/224654-1577021563.gif)
ಬಂಟ್ವಾಳ, ಡಿ. 22: ಕೇರಳಕ್ಕೆ ಎಂ. ಸ್ಯಾಂಡ್ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿವೊಂದು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಕರ್ನಾಟಕ-ಕೇರಳ ಗಡಿಭಾಗದ ಕರೋಪಾಡಿ ಗ್ರಾಮದ ಮುಗುಳಿ ಸಮೀಪದ ಪಾದೆಕಲ್ಲು ಎಂಬಲ್ಲಿ ರವಿವಾರ ಸಂಭವಿಸಿದೆ. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಟಿಪ್ಪರ್ ಲಾರಿಗೆ ಕಲ್ಲು ಎಸೆದು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.
ಕರೋಪಾಡಿ ಗ್ರಾಮದ ಮುಗುಳಿ ನಿವಾಸಿ ಅಬ್ದುಲ್ಲ ಎಂಬವರ ಪುತ್ರ ಸೈಯದ್ ಅನ್ವರ್(24) ಮೃತಪಟ್ಟ ಬೈಕ್ ಸವಾರ. ಇವರ ಸಂಬಂಧಿ ಕೇರಳದ ಬೇಕೂರು ನಿವಾಸಿ ಅಬೂಬಕರ್ ಎಂಬವರ ಪುತ್ರ ನವಾಬ್ (20) ಗಂಭೀರ ಗಾಯಗೊಂಡ ಸಹಸವಾರ.
ಘಟನೆ ವಿವರ: ಡಿ. 22ರಂದು ಅನ್ವರ್ ಅವರ ಚಿಕ್ಕಪ್ಪನ ಮಗಳ ಮದುವೆ ಪಾಟ್ರಕೋಡಿಯಲ್ಲಿ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅನ್ವರ್ ತನ್ನ ಸಂಬಂಧಿ ನವಾಬ್ ಜೊತೆ ಬುಲೇಟ್ ಬೈಕ್ನಲ್ಲಿ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಕನ್ಯಾನ ಕಡೆಯಿಂದ ಕೇರಳಕ್ಕೆ ಎಂ. ಸ್ಯಾಂಡ್ ಸಾಗಾಟ ಮಾಡುತ್ತಿದ್ದ ಲಾರಿ ಮುಗುಳಿ ಪಾದೆಕಲ್ಲು ಅಪಾಯಕಾರಿ ತಿರುವಿನಲ್ಲಿ ಬೈಕ್ಗೆ ಢಿಕ್ಕಿ ಹೊಡೆದು ಬಳಿಕ ಬೈಕ್ ಮೇಲೆ ಚಲಿಸಿ ಈ ಘಟನೆ ಸಂಭವಿಸಿದೆ. ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಅನ್ವರ್ ಸ್ಥಳದಲ್ಲಿ ಮೃತಪಟ್ಟಿದ್ದು, ನವಾಬ್ ನನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರತಿಭಟನೆ: ಘಟನೆ ನಡೆಯುತ್ತಿದ್ದಂತೆ ಕೇರಳದ ನೂರಾರು ಮಂದಿ ಆಗಮಿಸಿದ್ದು, ಲಾರಿ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಲಾರಿಗೆ ಕಲ್ಲು ಎಸೆದು ಚಕ್ರದ ಗಾಳಿ ತೆಗೆದು ಪ್ರತಿಭಟನೆ ನಡೆಸಿದರು.
ಕನ್ಯಾನ-ಬಾಯಾರು ರಸ್ತೆಯಲ್ಲಿ ಘನ ಗಾತ್ರದ ವಾಹನ ಸಂಚಾರ ಮಾಡಲು ಅನುಮತಿ ಇಲ್ಲ. ಪ್ರತಿನಿತ್ಯ ನೂರಾರು ಎಂಸ್ಯಾಂಡ್ ಹಾಗೂ ಮರಳು ಸಾಗಾಟ ಲಾರಿಗಳು ಸಂಚಾರ ಮಾಡುತ್ತಿದೆ. ಕಳೆದ ಆರು ತಿಂಗಳಲ್ಲಿ ಹಲವು ಅಪಘಾತ ಸಂಭವಿಸಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಕೂಡಾ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್ ಟಿ.ಡಿ ಹಾಗೂ ವಿಟ್ಲ ಪ್ರೋಬೆಷನರಿ ಎಸ್ಸೈ ವಿನೋದ್ ಕುಮಾರ್ ರೆಡ್ಡಿ ಅವರು ಜನರ ಮನವೋಲಿಸಲು ಪ್ರಯತ್ನಪಟ್ಟರು. ಪೊಲೀಸರ ಹಾಗೂ ಆಕ್ರೋಶಿತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಸ್ಥಳಕ್ಕೆ ಸಿಆರ್ಪಿ ಸಿಬ್ಬಂದಿ ಸ್ಥಳದಲ್ಲಿ ನಿಯೋಜಿಸಲಾಯಿತು. ಲಾರಿಗಳ ವಿರುದ್ಧ ಕ್ರಮ ಜರಗಿಸುತ್ತೇವೆ. ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದು ಬಂಟ್ವಾಳ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್ ಟಿ.ಡಿ ಅವರು ಭರವಸೆ ನೀಡಿದ ಬಳಿಕ ಜನರ ಆಕ್ರೋಶ ತಣ್ಣಗಾಯಿತು.
ಘಟನಾ ಸ್ಥಳದ ಸಮೀಪದ ಪೊದೆಯಲ್ಲಿ ಇನ್ನೊಂದು ಬೈಕ್ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಬಗ್ಗೆ ಯಾರಿಗೂ ಮಾಹಿತಿ ಲಭ್ಯವಾಗಿಲ್ಲ. ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.