ಪೌರತ್ವ ಮಸೂದೆ ವಿರುದ್ಧ ಡಿ.23ರಂದು ಪ್ರತಿಭಟನೆಗೆ ಭಟ್ಕಳ ಸಜ್ಜು
ಭಟ್ಕಳದಲ್ಲೇ ಠಿಕಾಣಿ ಹೂಡಿದ ಉನ್ನತ ಪೊಲೀಸ್ ಅಧಿಕಾರಿಗಳು
![ಪೌರತ್ವ ಮಸೂದೆ ವಿರುದ್ಧ ಡಿ.23ರಂದು ಪ್ರತಿಭಟನೆಗೆ ಭಟ್ಕಳ ಸಜ್ಜು ಪೌರತ್ವ ಮಸೂದೆ ವಿರುದ್ಧ ಡಿ.23ರಂದು ಪ್ರತಿಭಟನೆಗೆ ಭಟ್ಕಳ ಸಜ್ಜು](https://www.varthabharati.in/sites/default/files/images/articles/2019/12/22/224693-1577023499.jpg)
ಭಟ್ಕಳ: ಕೇಂದ್ರದ ಪೌರತ್ವ ತಿದ್ದುಪಡೆ ಕಾಯ್ದೆಯ ವಿರುದ್ಧ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಸಂಸ್ಥೆ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶ ನಡೆಯಲಿದ್ದು ಹತ್ತು ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ ಎಂದು ತಂಝಿಮ್ ಮುಖಂಡರು ತಿಳಿಸಿದ್ದಾರೆ. ಮೆರವಣೆಗೆ ಶಾಂತಿಯುತವಾಗಿ ನರವೇರಲಿದ್ದು ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಖ್ಯಾತ ಅಂಕಣಕಾರ ಶಿವಸುಂದರ್, ಸಿಪಿಐ(ಎಂ) ನ ಕೆ.ರಮೇಶ್, ಹಾಗೂ ಸ್ಥಳಿಯ ಮುಖಂಡರು ಮಾತನಾಡಲಿದ್ದಾರೆ.
ಈ ಕುರಿತಂತೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ತಂಝೀಮ್ ಹಾಗೂ ಜೆ.ಡಿ.ಎಸ್. ಮುಖಂಡ ಇನಾಯತುಲ್ಲಾ ಶಾಬಂದ್ರಿ ಎನ್.ಆರ್.ಸಿ. ಹಾಗೂ ಸಿಎಎ ಕಾಯ್ದೆಯನ್ನು ವಿರೋಧಿಸಿ ಭಟ್ಕಳದ ಎಲ್ಲ ಸಮುದಾಯವರು ಒಗ್ಗಟ್ಟಿನಿಂದ ಪ್ರತಿಭಟಿಸಲಿದ್ದಾರೆ. ಧರ್ಮ,ಜಾತಿ ಆಧಾರದಲ್ಲಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕೆಂದು ಅವರು ಆಗ್ರಹಿಸಿದರು.
ವ್ಯಾಪಕ ಪೊಲೀಸ್ ಬಂದೋಬಸ್ತ್; ಸೋಮವಾರದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಜಿಲ್ಲೆಯ ವಿವಿಧ ತಾಲೂಕಿನಿಂದ ಪೊಲೀಸರು ಭಟ್ಕಳಕ್ಕೆ ಬಂದು ಠಿಕಾಣಿ ಹೂಡಿದ್ದಾರೆ. ಅಷ್ಟೆ ಅಲ್ಲದೆ ಪಶ್ಚಿಮ ವಲಯ ಐಜಿಪಿ ಅರುಣ ಚಕ್ರವರ್ತಿ ಸೇರಿದಂತೆ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಭಟ್ಕಳದಲ್ಲೇ ನೆಲೆಸಿದ್ದಾರೆ. ವಿವಿಧೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು ನಗರದ್ಯಾಂತ ಹದ್ದಿನ ಕಣ್ಣಿಟ್ಟಿದ್ದಾರೆ.
ಈ ಕುರಿತಂತೆ ಭಟ್ಕಳದ ಎ.ಎಸ್.ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ ಅರುಣ ಚಕ್ರವರ್ತಿ, ಸೋಮವಾರ ತಂಝೀಂ ಸಂಸ್ಥೆಯಿಂದ ಶಾಂತಿಯುತ ಪ್ರತಿಭಟನೆ ನಡೆಸುವ ಕುರಿತು ಅರ್ಜಿ ಸಲ್ಲಿಸಿದ್ದು ಶಾಂತಿ ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್ಪಿ ಶಿವಪ್ರಕಾಶ್ ದೇವರಾಜ, ಎಸ್ಪಿ ಗೋಪಾಲ ಬ್ಯಾಕೋಡ, ಭಟ್ಕಳ ಎಎಸ್ಪಿ ನಿಖಿಲ್ ಬಿ, ಐಜಿಪಿ ಕಚೇರಿಯ ಡಿವೈಎಸ್ಪಿ ನಟರಾಜ ಮುಂತಾದವರು ಉಪಸ್ಥಿತರಿದ್ದರು.