'ಶಾಲಾ-ಕಾಲೇಜು ಮಟ್ಟದಲ್ಲೇ ಜನಪದ ಕಲೆಗೆ ಆದ್ಯತೆ ಸಿಗಬೇಕು'
ಜಾನಪದ ಅಕಾಡೆಮಿ ನೂತನ ಅಧ್ಯಕ್ಷೆ ಮಂಜಮ್ಮ ಜೋಗತಿ ಅಭಿಪ್ರಾಯ
![ಶಾಲಾ-ಕಾಲೇಜು ಮಟ್ಟದಲ್ಲೇ ಜನಪದ ಕಲೆಗೆ ಆದ್ಯತೆ ಸಿಗಬೇಕು ಶಾಲಾ-ಕಾಲೇಜು ಮಟ್ಟದಲ್ಲೇ ಜನಪದ ಕಲೆಗೆ ಆದ್ಯತೆ ಸಿಗಬೇಕು](https://www.varthabharati.in/sites/default/files/images/articles/2019/12/22/224706-1577029534.jpg)
ಉಡುಪಿ, ಡಿ.22: ರಾಜ್ಯದಲ್ಲಿರುವ ವಿಪುಲವಾಗಿರುವ ಜಾನಪದ ಕಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ನಿರ್ಧರಿಸಿದ್ದು, ಶಾಲಾ-ಕಾಲೇಜು ಮಟ್ಟದಲ್ಲೇ ಮಕ್ಕಳಿಗೆ ಇವುಗಳ ಬಗ್ಗೆ ಅರಿವು ಹಾಗೂ ತರಬೇತಿ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ನೂತನ ಅಧ್ಯಕ್ಷರಾಗಿರುವ ಮಂಜಮ್ಮ ಜೋಗತಿ ಹೇಳಿದ್ದಾರೆ.
ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಬೀಯಂಗ್ ಸೋಶಿಯಲ್ ಉಡುಪಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಎಂಜಿಎಂ ಕಾಲೇಜು ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಆರ್ಆರ್ಸಿಯ ಧ್ವನ್ಯಾಲೋಕದಲ್ಲಿ ಇಂದು ಆಯೋಜಿಸಲಾಗಿದ್ದ ಜಾನಪದ ಅಕಾಡೆಮಿ ಅಧ್ಯಕ್ಷರೊಂದಿಗೆ 'ಮಾತುಕತೆ' ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಅಕಾಡೆಮಿ, ಜಾನಪದ ಕಲೆಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ಆದ್ಯತೆ ನೀಡಲಿದೆ. ಪ್ರತಿ ಶಾಲೆ-ಕಾಲೇಜುಗಳಲ್ಲಿ ಮಕ್ಕಳಿಗೆ ವಿವಿಧ ಜಾನಪದ ಕಲೆಗಳ ಕುರಿತಂತೆ ತರಬೇತಿ ನೀಡಲು ತರಬೇತಿ ಮೂಲಕ ನುರಿತ ಶಿಕ್ಷಕರನ್ನು ನೇಮಿಸಲಿದೆ. ಜಾನಪದ ಶಿಕ್ಷಕರಿಗೆ 10,000ರೂ. ಹಾಗೂ ಸಹಾಯಕ ಶಿಕ್ಷಕರಿಗೆ 2,500ರೂ. ಗೌರವಧನ ನೀಡಲು ನಿರ್ಧರಿಸಿದೆ. ಇದರೊಂದಿಗೆ ಶಾಲೆ-ಕಾಲೇಜುಗಳಿಗೆ ವಾದ್ಯ-ಪರಿಕರಗಳನ್ನು ಬಾಡಿಗೆಯಲ್ಲಿ ನೀಡಲು ಸಹ ಪ್ರಯತ್ನಿಸುತ್ತೇವೆ. ಶಾಲಾ-ಕಾಲೇಜುಗಳಲ್ಲಿ ಜನಪದ ಶಿಕ್ಷಕರನ್ನು ನೇಮಿಸಿದರೆ ಕಲೆ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಎಲ್ಲಾ ಜಿಲ್ಲೆಗಳ ಯುವ ಜಾನಪದ ಕಲಾವಿದರನ್ನು ಸೇರಿಸಿ ಸಮ್ಮೇಳನವನ್ನು ಆಯೋಜಿಸಲು, ರಾಜ್ಯದಲ್ಲಿರುವ 300ರಿಂದ 400ರಷ್ಟು ಮಂಗಳಮುಖಿ ಕಲಾವಿದರನ್ನು ಒಗ್ಗೂಡಿಸಿ ಅಕಾಡೆಮಿ ಮೂಲಕ ಮಂಗಳಮುಖಿ ಉತ್ಸವ ಮಾಡುವ ಕನಸು ನನಗಿದೆ ಎಂದು ಬಳ್ಳಾರಿಯಲ್ಲಿ ಜೋಗತಿ ಕಲಾವಿದೆಯಾಗಿ ಹೆಸರು ಪಡೆದು, ಜಾನಪದ ಅಕಾಡೆಮಿಯ ಸದಸ್ಯೆಯಾಗಿ, ಇದೀಗ ಅಧ್ಯಕ್ಷೆಯಾಗಿ ಭಡ್ತಿ ಪಡೆದಿರುವ ಮಂಜಮ್ಮ ಜೋಗತಿ ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ ಜಾನಪದ ಕಲೆಯ ತರಬೇತಿ ಪ್ರಾರಂಭವಾಗಲಿದೆ. ಈಗಾಗಲೇ ಕರಾವಳಿಯ ಜಾನಪದ ಕಲೆಯಾದ ಕಂಗೀಲು ನೃತ್ಯವನ್ನು ಹೊಸಪೇಟೆಯ ಶಾಲೆಯೊಂದರಲ್ಲಿ ಕಲಿಸಲಾಗುತ್ತಿದೆ.ಅದೇ ರೀತಿ ಇಲ್ಲಿನ ಭೂತನೃತ್ಯವನ್ನು ಕಲಿಸು ವ್ಯವಸ್ಥೆ ಮಾಡಲಾಗುತ್ತಿದೆ.
ರಾಜ್ಯದ ಪ್ರತಿಯೊಂದು ವಿಭಾಗ ಮಟ್ಟದ ಜಾನಪದ ಕಲಾವಿದರನ್ನು ಒಟ್ಟು ಸೇರಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಹಾಗೂ ಆಯಾ ವಿಭಾಗದ ಕಲಾವಿದರ ಸಮಗ್ರ ಪರಿಚಯ ನೀಡುವ ಪುಸ್ತಕ ಪ್ರಕಟಿಸುವ ಯೋಜನೆಯನ್ನೂ ಹಾಕಿಕೊಂಡಿದ್ದೇನೆ. ಉಡುಪಿಯಲ್ಲೂ ದೊಡ್ಡ ಮಟ್ಟದ ಜನಪದ ಕಾರ್ಯಕ್ರಮ ವೊಂದನ್ನು ಮಾಡಲು ಸಿದ್ಧನಿದ್ದೇನೆ ಎಂದರು.
ದೇಶದಲ್ಲೇ ಪ್ರಥಮ: ಮಂಗಳಮುಖಿಯಾಗಿ, ಜೋಗತಿಯಾಗಿ ಕಲೆಯಿಂದಲೇ ನಾನು ಮೇಲೆ ಬಂದವಳು. ನನ್ನ ಕಲೆಯನ್ನು ಗುರುತಿಸಿ ಹಿಂದಿನ ಸರಕಾರ ನನ್ನನ್ನು ಅಕಾಡೆಮಿಯ ಸದಸ್ಯೆಯಾಗಿ ಆಯ್ಕೆ ಮಾಡಿತು. ಇದೀಗ ಈಗಿನ ಸರಕಾರ ನನ್ನನ್ನು ಅಕಾಡೆಮಿಯ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದೆ. ಇಡೀ ದೇಶದಲ್ಲಿ ಮಂಗಳಮುಖಿಯೊಬ್ಬಳು ಅಕಾಡೆಮಿಯೊಂದಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಇದೇ ಪ್ರಥಮ. ನನಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೋರಿದರು.
ನಾನು ಹುಟ್ಟಿದ್ದು ಆರ್ಯವೈಶ್ಯ ಸಮಾಜದಲ್ಲಿ. ನಮ್ಮ ಸಮಾಜದ ಪ್ರಪ್ರಥಮ ಜೋಗತಿ ನಾನಾಗಿದ್ದೆ. ಹೀಗಾಗಿ ಎಸೆಸೆಲ್ಸಿ ಓದುತಿದ್ದಾಗ ನನ್ನನ್ನು ಮನೆಯಿಂದ ಹೊರಹಾಕಿದರು. ಆಗ ನನಗೆ ತಾಯಿಯಾಗಿ, ಗುರುವಾಗಿ ಸಿಕ್ಕಿದವರು ಕಾಳವ್ವ ಜೋಗ್ತಿ. ಅವರ ಆಸರೆಯಲ್ಲಿ ನಾನು ಹಾಡು-ನೃತ್ಯವನ್ನು ಕಲಿತಿದ್ದಲ್ಲದೇ, ನಾಟಕದಲ್ಲೂ ಪಾತ್ರ ವಹಿಸಲು ಆರಂಭಿಸಿದೆ ಎಂದು ಅವರು ತನ್ನ ಕಷ್ಟದ ದಿನಗಳ ಅನುಭವಗಳನ್ನು ಮೆಲುಕು ಹಾಕಿದರು. ಅಂದು ಬಣ್ಣ ಹಚ್ಚಿ ರಂಗಸ್ಥಳವನ್ನೇರಿದವಳಿಗೆ ಈವರೆಗೆ ಬಣ್ಣದ ವ್ಯಾಮೋಹ ನನ್ನಿಂದ ದೂರವಾಗಲಿಲ್ಲ ಎಂದರು.
ಮಂಗಳಮುಖಿಯರು ಎದುರಿಸುತ್ತಿರುವ ಕಳಂಕ, ತಾರತಮ್ಯದ ಕುರಿತು ಸಭಿಕರೊಬ್ಬರು ಪ್ರಶ್ನಿಸಿದಾಗ, ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮನೆಯವರು ಇಂಥ ಮಕ್ಕಳನ್ನು ಅರ್ಥಮಾಡಿಕೊಳ್ಳಬೇಕು. ಮನೆಯಲ್ಲಿ ಗಂಡು ಅಥವಾ ಹೆಣ್ಣು ಮಕ್ಕಳಿಗೆ ತೋರುವ ಪ್ರೀತಿ, ಮಮತೆ ಯನ್ನು ತೃತೀಯ ಲಿಂಗಿಗೂ ತೋರಿಸಬೇಕು. ಇದರೊಂದಿಗೆ ಮಗುವಿಗೆ ಶಿಕ್ಷಣವನ್ನು ನೀಡಬೇಕು ಎಂದರು.
ಮಂಗಳಮುಖಿಯರೂ ಸಹ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಮಾಜಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಬೇಕು.ಈಗ ಸಮಾಜ ನಮ್ಮನ್ನು ಗುರುತಿಸಿ, ಗೌರವಿಸುತ್ತಿದೆ. ಅವರು ಇತರರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಲು ಕಲಿಯಬೇಕು ಎಂದು ಮಂಜಮ್ಮ ಕಿವಿಮಾತು ಹೇಳಿದರು.
ಪ್ರೊ.ವರದೇಶ ಹಿರೇಗಂಗೆ, ಪ್ರೊ.ಎಂ.ಎಲ್.ಸಾಮಗ, ಪ್ರೊ.ಶಂಕರ್ ಹಾಗೂ ಉದ್ಯಮಿ ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ಬೀಯಿಂಗ್ ಸೋಶಿಯಲ್ನ ಅವಿನಾಶ್ ಕಾಮತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.