ಬೇಹುಗಾರಿಕೆಯು ‘ಜೇಮ್ಸ್ ಬಾಂಡ್, ಗನ್ಗಳು, ಯುವತಿಯರು’ ಇರುವ ಜಗತ್ತಲ್ಲ: ಸೇನಾ ವರಿಷ್ಠ
ಪುಣೆ, ಡಿ. 22: ಯಶಸ್ವಿ ಸೇನಾ ಕಾರ್ಯಾಚರಣೆಯಲ್ಲಿ ಬೇಹುಗಾರಿಕೆಯ ಮಹತ್ವ ಒತ್ತಿ ಹೇಳಿದ ಸೇನಾ ವರಿಷ್ಠ-ನಿಯೋಜಿತ ಲೆಫ್ಟಿನೆಂಟ್ ಜನರಲ್ ಮನೋಜ್ ನರ್ವಾಣೆ, ಬೇಹುಗಾರಿಕೆ ‘ಜೇಮ್ಸ್ ಬಾಂಡ್, ಗನ್ಗಳು ಹಾಗೂ ಯುವತಿಯರು’ ಇರುವ ಜಗತ್ತು ಅಲ್ಲ. ಆದರೆ, ಜೋನ್ ಲಿ ಕಾರ್ಸ್ ಅವರ ‘ಜಾರ್ಜ್ ಸ್ಮೈಲ್’ ಕಾದಂಬರಿಗಿಂತಲೂ ಹೆಚ್ಚು ಎಂದಿದ್ದಾರೆ.
ಮಾಜಿ ಪತ್ರಕರ್ತ ನಿತಿನ್ ಗೋಖಲೆ ಅವರ ‘ಆರ್.ಎನ್. ರಾವ್: ಜಂಟಲ್ಮ್ಯಾನ್ ಸ್ಪೈಮಾಸ್ಟರ್’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಆರ್.ಎನ್. ರಾವ್ ಭಾರತದ ಬಾಹ್ಯ ಬೇಹುಗಾರಿಕೆ ಸಂಸ್ಥೆ ಸಂಶೋಧನೆ ಹಾಗೂ ವಿಶ್ಲೇಷಣೆ ದಳ (ಆರ್ ಆ್ಯಂಡ್ ಎಡಬ್ಲು)ದ ಮೊದಲ ವರಿಷ್ಠರಾಗಿ ಸೇವೆ ಸಲ್ಲಿಸಿದ್ದರು. ‘‘ಸೇನಾ ಕಾರ್ಯಾಚರಣೆ ಹಾಗೂ ಬೇಹುಗಾರಿಕೆ ಜೊತೆಜೊತೆಯಾಗಿ ಸಾಗುತ್ತವೆ. ನಾವು ನಮ್ಮ ಕಾರ್ಯಾಚರಣೆಯನ್ನು ಶತ್ರುಗಳ ಸುದ್ದಿ ಸಂಗ್ರಹದಿಂದ ಆರಂಭಿಸುತ್ತೇವೆ. ಆ ಸುದ್ದಿಯನ್ನು ನಮ್ಮ ಬೇಹುಗಾರರಿಂದ ಪಡೆಯುತ್ತೇವೆ’’ ಎಂದು ಅವರು ಹೇಳಿದರು.
ಸಂಶೋಧನೆ ಹಾಗೂ ವಿಶ್ಲೇಷಣೆ ದಳ ಸೇರಿದಂತೆ ವಿವಿಧ ಬೇಹುಗಾರಿಕೆ ಸಂಸ್ಥೆಗಳಿಂದ ನಾವು ಬೆಂಬಲ ಪಡೆಯದೇ ಇದ್ದಿದ್ದರೆ, ನಮ್ಮ ಸೇನಾ ಕಾರ್ಯಾಚರಣೆ ಯಶಸ್ವಿಯಾಗುತ್ತಿರಲಿಲ್ಲ ಎಂದು ನಾನು ಧೈರ್ಯದಿಂದ ಹೇಳುತ್ತೇನೆ ಎಂದು ಅವರು ತಿಳಿಸಿದರು. ‘‘ಬೇಹುಗಾರಿಕೆ ಬಗ್ಗೆ ಮಾತನಾಡುವಾಗ, ಚಿಂತಿಸುವಾಗ ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಜೇಮ್ಸ್ ಬಾಂಡ್, ಗನ್ಗಳು, ಹೆಣ್ಣುಗಳು, ಗಿಟಾರ್ ಹಾಗೂ ಗ್ಲಾಮರ್ ಬರುತ್ತವೆ. ಆದರೆ, ಬೇಹುಗಾರಿಕೆ ಅಂದರೆ ಈ ಜಗತ್ತು ಇದಲ್ಲ’’ ಎಂದು ನರ್ವಾಣೆ ಹೇಳಿದ್ದಾರೆ.