ಯುವಜನರೇ ಮೋದಿ, ಶಾ ನಿಮ್ಮ ಭವಿಷ್ಯ ನಾಶ ಮಾಡಿದ್ದಾರೆ: ರಾಹುಲ್ ಗಾಂಧಿ
ಹೊಸದಿಲ್ಲಿ, ಡಿ. 22: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ರವಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಿರುದ್ಯೋಗ ಮತ್ತು ರಾಜ್ಯದ ಆರ್ಥಿಕ ದುಸ್ಥಿತಿ ವಿರುದ್ಧದ ಸಾರ್ವಜನಿಕ ಆಕ್ರೋಶವನ್ನು ಎದುರಿಸಲಾಗದೆ ಅವರು ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘‘ಭಾರತದ ಆತ್ಮೀಯ ಯುವ ಜನರೇ, ಮೋದಿ ಹಾಗೂ ಅಮಿತ್ ಶಾ ಅವರು ನಿಮ್ಮ ಭವಿಷ್ಯವನ್ನು ನಾಶ ಮಾಡಿದ್ದಾರೆ. ಉದ್ಯೋಗ ನಷ್ಟ ಹಾಗೂ ಆರ್ಥಿಕತೆಗೆ ಅವರು ಮಾಡಿದ ಹಾನಿಯ ಕುರಿತು ಯುವಜನರ ಆಕ್ರೋಶ ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆದುದರಿಂದಲೇ ಅವರು ನಮ್ಮ ಪ್ರೀತಿಯ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನನ್ನೂ ಪ್ರೀತಿಯಿಂದ ಕಾಣುವ ಮೂಲಕ ಮಾತ್ರ ನಾವು ಇದನ್ನು ಸೋಲಿಸಬಹುದು’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಕಾಂಗ್ರೆಸ್ ಮಹಾತ್ಮಾ ಗಾಂಧಿ ಅವರ ಸ್ಮಾರಕ ರಾಜ್ಘಾಟ್ನಲ್ಲಿ ಸೋಮವಾರ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆ ಆರಂಭವಾಗುವ ಸಂದರ್ಭ ವಿದೇಶಕ್ಕೆ ತೆರಳಿರುವ ರಾಹುಲ್ ಗಾಂಧಿ ಭಾರತಕ್ಕೆ ಹಿಂದಿರುಗಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.