ಎಲ್ಲರಿಗೂ ನೆಮ್ಮದಿಯ ಬದುಕು ಮುಖ್ಯ : ಅತೀ.ವಂ.ಪೀಟರ್ ಪಾವ್ಲ್ ಸಲ್ದಾನಾ
ಮಂಗಳೂರು: ಕ್ರಿಸ್ಮಸ್ ಪ್ರಯುಕ್ತ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಪೀಟರ್ ಪಾವ್ಲ್ ಸಲ್ದಾನಾ ಅವರು ನಾಡಿನ ಜನತೆಗೆ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ.
ಮಂಗಳೂರಿನ ಕೆಥೊಲಿಕ್ ಕ್ರೈಸ್ತ ಧರ್ಮಾಧ್ಯಕ್ಷರ ನಿವಾಸದಲ್ಲಿ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಆಚರಣೆ ನಡೆಸಿ ಅವರು ಇಂದು ಸಂದೇಶ ನೀಡಿದರು.
ದೇವರ ಪುತ್ರರಾದ ಯೇಸು ಕಂದ, ಬಡತನ, ಧೀನತೆ ಮತ್ತು ಸ್ವತ್ಯಾಗದಲ್ಲಿ ಜನಿಸಿದರು. ಗೋದಲಿಯಲ್ಲಿ ಜೋಸೆಫ್ ಮತ್ತು ಮರಿಯ ಅವರೊಡನೆ ಯೇಸು ಕಂದನ ಮೂರ್ತಿಯನ್ನಿಟ್ಟಾಗ ಎಲ್ಲವೂ ಅರ್ಥಭರಿತವಾಗುತ್ತದೆ, ಜೀವ ತುಂಬಿದಂತಾಗುತ್ತದೆ, ಎಲ್ಲವೂ ಮಹತ್ವದ್ದಾಗುತ್ತದೆ. ಯೇಸುವನ್ನು ಅಲ್ಲಿಂದ ತೆಗೆದಾಗ ಅದು ಕೇವಲ ಒಂದು ಗ್ರಾಮೀಣ ಬದುಕಿನ ಚಿತ್ರಣವಾಗುತ್ತದೆ. ಯೇಸುವು ನಮ್ಮ ಜೀವನಕ್ಕೆ ಮತ್ತು ಸುತ್ತಮುತ್ತಲಿಗೆ ಅರ್ಥ ತುಂಬುವವರಾಗುತ್ತಾರೆ. ಯೇಸು ಕ್ರಿಸ್ತರು ಜನಿಸಿದ ಆ ಕಾಲದಲ್ಲಿ ರೋಮನ್ನರು ಸಾಮಾನ್ಯ ಬಡ ಜನರ ವಿರುದ್ಧ ಎಲ್ಲಾ ರೀತಿಯ ಬಲ ಪ್ರಯೋಗ ಮಾಡುತ್ತಿದ್ದರು ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಅವರನ್ನು ಕೊಲ್ಲುತ್ತಿದ್ದರು. ಶೋಷಣೆಯು ಎಷ್ಟು ಬೆಳೆದಿತ್ತೆಂದರೆ ಜನರು ಹೊರಬರಲಾರದಂತಹ ಕೊಳವೆಯೊಳಗೆ ಜೀವಿಸಿದ್ದಂತಿತ್ತು. ಅಂದಿನ ವಾಸ್ತವಿಕ ಕತ್ತಲೆಯಲ್ಲಿ ಹೊಸ ಭರವಸೆ ತುಂಬಲು ಮತ್ತು ಹೊರದಬ್ಬಲ್ಪಟ್ಟವರು ಹಾಗೂ ಶೋಷಿತರು ಘನತೆಯಿಂದ ಜೀವಿಸಲು ಅನುವು ಮಾಡಿಕೊಡಲು ಯೇಸು ಜನಿಸಿದರು. ಯೇಸುವಿನಲ್ಲಿ ಮಾನವನ ಜೀವನವು ನಿಜ ಅರ್ಥ ಮತ್ತು ಅಭಿವೃದ್ಧಿಯನ್ನು ಹುಡುಕುವತ್ತ ಸಾಗುತ್ತದೆ. ಅವರು ಕಟ್ಟಕಡೆಯ ವ್ಯಕ್ತಿಯ ಮಿತ್ರರಾಗುತ್ತಾರೆ. ಯೇಸುವು ನಿಜವಾಗಿ ಪ್ರಪಂಚವನ್ನು ಬೆಳಗಿಸುವ ನಕ್ಷತ್ರ ಎಂದು ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು.
ಈ ವೇಳೆ ವಂದನೀಯ ಮ್ಯಾಕ್ಸಿಂ ನೊರೊನ್ಹಾ ,ಶ್ರೇಷ್ಠ ಗುರುಗಳು, ಮಂಗಳೂರು ಧರ್ಮಪ್ರಾಂತ್ಯ, ವಂದನೀಯ ವಿಕ್ಟರ್ ಜೋರ್ಜ್ ಡಿಸೋಜಾ, ಚಾನ್ಸಲರ್, ಮಂಗಳೂರು ಧರ್ಮಪ್ರಾಂತ್ಯ, ವಂದನೀಯ ವಿಕ್ಟರ್ ವಿಜೆಯ್ ಲೋಬೊ, ಸಾರ್ವಜನಿಕ ಸಂಪರ್ಕ ಆಧಿಕಾರಿ, ಮಂಗಳೂರು ಧರ್ಮಪ್ರಾಂತ್ಯ, ಮಾರ್ಸೆಲ್ ಮೊಂತೇರೊ, ಸಾರ್ವಜನಿಕ ಸಂಪರ್ಕ ಆಧಿಕಾರಿ, ಮಂಗಳೂರು ಧರ್ಮಪ್ರಾಂತ್ಯ, ವಂದನೀಯ ರಿಚಾರ್ಡ್ ಡಿಸೋಜಾ, ನಿರ್ದೇಶಕರು, ಕೆನರಾ ಸಂಪರ್ಕ ಕೇಂದ್ರ, ಮಂಗಳೂರು ಧರ್ಮಪ್ರಾಂತ್ಯ ದ ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.







