ರಾಷ್ಟ್ರಪತಿಯಿಂದ ಚಿನ್ನದ ಪದಕ ಸ್ವೀಕರಿಸಲು ಈ ಪ್ರತಿಭಾವಂತೆಗೆ ಅವಕಾಶ ನಿರಾಕರಿಸಿದ್ದೇಕೆ ಗೊತ್ತೇ ?
ಪುದುಚೇರಿ: ಹಿಜಾಬ್ (ಶಿರವಸ್ತ್ರ) ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿನಿಯೊಬ್ಬಳಿಗೆ ಘಟಿಕೋತ್ಸವದಲ್ಲಿ ರಾಷ್ಟ್ರಪತಿಯಿಂದ ಚಿನ್ನದ ಪದಕ ಸ್ವೀಕರಿಸಲು ಅವಕಾಶ ನೀಡದ ಅಮಾನವೀಯ ಘಟನೆ ನಿನ್ನೆ ನಡೆದಿದೆ.
ಪುದುಚೇರಿ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಚಿನ್ನದ ಪದಕ ಸ್ವೀಕರಿಸಲು 10 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇವರಲ್ಲಿ ಸೇರಿದ್ದ ಏಕೈಕ ಮುಸ್ಲಿಂ ವಿದ್ಯಾರ್ಥಿನಿಗೆ ಕೊನೆ ಕ್ಷಣದಲ್ಲಿ ಅವಕಾಶ ನಿರಾಕರಿಸಲಾಯಿತು.
ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಮುಗಿಲು ಮುಟ್ಟಿರುವ ನಡುವೆಯೇ ತಾರತಮ್ಯದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಆದರೆ ಪೊಲೀಸರ ಪ್ರಕಾರ, ಕಳೆದ ವಾರ ವಿವಿಯಲ್ಲಿ ಸಿಎಎ ವಿರುದ್ಧ ನಡೆದ ಮಾನವ ಸರಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಈಕೆಗೆ ಅವಕಾಶ ನಿರಾಕರಿಸಲಾಗಿದೆ.
ರಬೀಹಾ ಅಬ್ದುರ್ರಹ್ಮಾನ್ ಸಮೂಹ ಸಂವಹನ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ ಗಳಿಸಿದ್ದರು. "ರಾಷ್ಟ್ರಪತಿಗಳಿಂದ ಚಿನ್ನದ ಪದಕ ಸ್ವೀಕರಿಸಲು ಇತರ ಒಂಬತ್ತು ಮಂದಿ ವಿದ್ಯಾರ್ಥಿಗಳ ಜತೆ ನಾನು ಜವಾಹರ್ಲಾಲ್ ನೆಹರೂ ಸಭಾಗೃಹದಲ್ಲಿ ಕುಳಿತಿದ್ದೆ. ಆಗ ಹಿರಿಯ ಪೊಲೀಸ್ ಅಧೀಕ್ಷಕಿ, ನನ್ನೊಂದಿಗೆ ಮಾತನಾಡುವ ಸಲುವಾಗಿ ತಮ್ಮ ಜತೆ ಕೆಳಗೆ ಇಳಿಯುವಂತೆ ಸೂಚಸಿದರು. ನಾನು ಕೆಳಗೆ ಬಂದಾಗ, ಇತರ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ ಹಿಜಾಬ್ ಧರಿಸಿದ್ದೇಕೆ ಎಂದು ಪ್ರಶ್ನಿಸಿದರು" ಎಂದು ರಬೀಹಾ ವಿವರಿಸಿದ್ದಾರೆ.
ಮಾಮೂಲಿಯಾಗಿ ಇದನ್ನು ಧರಿಸುತ್ತೇನೆ ಎಂದು ಆಕೆ ಹೇಳಿದಾಗ, ಸಭಾಗೃಹದ ಹೊರಗೆಯೇ ಉಳಿಯುವಂತೆ ಸೂಚಿಸಿದ್ದಾಗಿ ವಿದ್ಯಾರ್ಥಿನಿ ಹೇಳಿದ್ದಾರೆ.
"ಎಸ್ಎಸ್ಪಿ ಆಕಾಂಕ್ಷ ಯಾದವ್ ಸಭಾಗೃಹಕ್ಕೆ ವಾಪಸ್ಸಾಗಿ ಬಾಗಿಲು ಮುಚ್ಚಿದರು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ, ನನಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಏಕೆ ನೀಡುತ್ತಿಲ್ಲ ಎಂದು ಪೊಲೀಸರನ್ನು ಕೇಳಿದಾಗ, ಯಾವುದೇ ಉತ್ತರ ಸಿಗಲಿಲ್ಲ. ಎಸ್ಎಸ್ಪಿ ಹೊರಗೆ ಬರಲೂ ಇಲ್ಲ. ಸಹಪಾಠಿಗಳ ಹರ್ಷೋದ್ಗಾರದ ನಡುವೆ ಚಿನ್ನದ ಪದಕ ಸ್ವೀಕರಿಸುವುದು ನನ್ನ ಕನಸಾಗಿತ್ತು. ಅದು ಹೀಗೆ ನುಚ್ಚುನೂರಾಗುತ್ತದೆ ಎಂದು ಕಲ್ಪಿಸಿಕೊಂಡಿರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
"ನಾನು ಕಷ್ಟದಿಂದ ಗಳಿಸಿದ ಚಿನ್ನದ ಪದಕ ಬಹಿಷ್ಕರಿಸುವ ಉದ್ದೇಶ ನನಗಿರಲಿಲ್ಲ. ಆದರೆ ಇದೀಗ ನನ್ನ ವಿರುದ್ಧ ತಾರತಮ್ಯ ಎಸಗಿದ್ದಾರೆ. ಇನ್ನು ನನಗದು ಬೇಡ" ಎಂದು ವಿವರಿಸಿದರು. 189 ಮಂದಿ ಚಿನ್ನದ ಪದಕ ವಿಜೇತರ ಪೈಕಿ ರಾಷ್ಟ್ರಪತಿಗಳಿಂದ ಪದಕ ಸ್ವೀಕರಿಸಲು ರಬೀಹಾ ಸೇರಿದಂತೆ ಕೇವಲ 10 ಮಂದಿಯನ್ನು ಆಯ್ಕೆ ಮಾಡಲಾಗಿತ್ತು.