ಕಣ್ಣೂರು - ಕುಲಶೇಖರ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರೂ. : ಶಾಸಕ ಕಾಮತ್
![ಕಣ್ಣೂರು - ಕುಲಶೇಖರ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರೂ. : ಶಾಸಕ ಕಾಮತ್ ಕಣ್ಣೂರು - ಕುಲಶೇಖರ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ರೂ. : ಶಾಸಕ ಕಾಮತ್](https://www.varthabharati.in/sites/default/files/images/articles/2019/12/24/224934-1577180589.jpeg)
ಮಂಗಳೂರು : ಅಳಪೆ ಕನ್ನಗುಡ್ಡೆಯಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಯ ಬಗ್ಗೆ ಸ್ಥಳೀಯರ ಜೊತೆ ಶಾಸಕ ವೇದವ್ಯಾಸ್ ಕಾಮತ್ ಸಮಾಲೋಚನೆ ನಡೆಸಿದರು.
ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಪ್ರಾರಂಭಗೊಂಡು ಕನ್ನಗುಡ್ಡೆಯ ಮೂಲಕ ಮಂಗಳೂರು - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯು 5 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣಗೊಳಿಸುವ ಕಾಮಗಾರಿಯ ಬಗ್ಗೆ ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.
ಕಣ್ಣೂರಿನಿಂದ ಕುಲಶೇಖರವನ್ನು ಸಂಪರ್ಕಿಸುವ ಈ ರಸ್ತೆಯು ಸುಮಾರು 5 ಕಿಮೀ ಉದ್ದ ಹಾಗೂ ಈಗ ಇರುವ ರಸ್ತೆಗಿಂತ ಸ್ವಲ್ಪ ಅಗಲೀಕರಣಗೊಳಿಸಿ ಇಲ್ಲಿನ ಜನರಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಸ್ಥಳೀಯರ ಜೊತೆ ಮಾತುಕತೆ ನಡೆಸಿ ರಸ್ತೆ ಅಗಲೀಕರಣಕ್ಕೆ ಸಹಕರಿಸುವಂತೆ ಕೇಳಿಕೊಂಡಿದ್ದೇನೆ. ಈ ಪ್ರದೇಶದ ಜನರು ನಿತ್ಯ ಓಡಾಟಕ್ಕಾಗಿ ಕಿರಿದಾದ ರಸ್ತೆಯ ಮೂಲಕ ತೆರಳಲು ಸಂಕಷ್ಟಪಡುವ ಬಗ್ಗೆ ಇಲ್ಲಿನ ನಮ್ಮ ಪಕ್ಷದ ಮುಖಂಡರು ಮಾಹಿತಿ ನೀಡಿದ್ದಾರೆ. ಈ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡರೆ ಬಹಳಷ್ಟು ಜನರಿಗೆ ಉಪಯೋಗವಾಗಲಿದೆ. ಹಾಗಾಗಿ ಜನರು ಪೂರ್ಣ ಪ್ರಮಾಣದಲ್ಲಿ ನಮ್ಮೊಂದಿಗೆ ಸಹಕರಿಸಿದರೆ ಶೀಘ್ರವೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈ ಸಂದರ್ಭ ಸ್ಥಳೀಯ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ರೂಪಾ ಪೂಜಾರಿ, ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ, ನರೇಶ್ ಸರಿಪಲ್ಲ, ಪ್ರವೀಣ್ ಕನ್ನಗುಡ್ಡೆ, ಮಾಧವ ಕನ್ನಗುಡ್ಡೆ,ಸುರೇಶ್ ಆಚಾರಿ, ಮೋಹನ್ ದಾಸ್ ಶೆಟ್ಟಿ, ದಿನೇಶ್ ನೂಜಿ, ಸಂತೋಷ್ ಹೆಗ್ಡೆ ಶಿವನಗರ, ಗಾಯತ್ರಿ ಕನ್ನಗುಡ್ಡೆ,ಸುರೇಶ್ ಕನ್ನಗುಡ್ಡೆ, ಸತೀಶ್ ಕನ್ನಗುಡ್ಡೆ, ಲೋಕೇಶ್ ಕನ್ನಗುಡ್ಡೆ, ಶರಣ್ ಸರಿಪಲ್ಲ, ಕಿರಣ್ ಸರಿಪಲ್ಲ, ರಘು ಕನ್ನಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.