ಕೇರಳದ ಯುವಕರ ಮೇಲೆ ನಿರಾಧಾರ ಆರೋಪ: ಪಿ. ಕರುಣಾಕರನ್
ಸ್ವತಂತ್ರ ನ್ಯಾಯಾಂಗ ತನಿಖೆಗೆ ಆಗ್ರಹ
ಮಂಗಳೂರು, ಡಿ. 24: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರದಲ್ಲಿ ಕೇರಳದಿಂದ ಬಂದ ಯುವಕರ ತಂಡ ಭಾಗವಹಿಸಿತ್ತು ಎಂಬುದು ನಿರಾಧಾರ ಆರೋಪ ಎಂದು ಮಾಜಿ ಎಂಪಿ ಪಿ. ಕರುಣಾಕರನ್ ಹೇಳಿದ್ದಾರೆ.
ಕರುಣಾಕರನ್ ನೇತೃತ್ವದಲ್ಲಿ ಇಂದು ಕೇರಳದ ಸಂಸದರು, ಶಾಸಕರು ಹಾಗೂ ಸಿಪಿಎಂ ನಾಯಕರನ್ನು ಒಳಗೊಂಡ ತಂಡವು ಗೋಲಿಬಾರ್ನಲ್ಲಿ ಮೃತಪಟ್ಟ ಜಲೀಲ್ ಹಾಗೂ ನೌಶೀನ್ ಮನೆ ಹಾಗೂ ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಕೇರಳ ರಾಜ್ಯದಿಂದ ಹಿಂದಿನಿಂದಲೂ ಶಿಕ್ಷಣ, ವೈದ್ಯಕೀಯ ಸೇವೆಯಲ್ಲದೆ ಉದ್ಯೋಗ ನಿಮಿತ್ತವೂ ಸಾವಿರಾರು ಸಂಖ್ಯೆಯಲ್ಲಿ ಜನರು, ವಿದ್ಯಾರ್ಥಿಗಳು ಆಗಮಿಸುತ್ತಾರೆ. ಎರಡು ರಾಜ್ಯಗಳ ಸಂಬಂಧವೂ ಉತ್ತಮವಾಗಿದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ಆಡಳಿತ ನಡೆಸುವ ನಾಯಕರು ಈ ರೀತಿಯ ಹೇಳಿಕೆ, ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ ಎಂದವರು ಬೇಸರಿಸಿದರು.
ನಮ್ಮ ತಂಡ ಆಸ್ಪತ್ರೆಗೂ ಭೇಟಿ ನೀಡಿ ಗಾಯಗೊಂಡವರನ್ನು ಮಾತನಾಡಿಸಿದ್ದೇವೆ. ಅವರಲ್ಲಿ ಯಾರೂ ಕೇರಳದವರಿಲ್ಲ. ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ವಿದ್ಯಾರ್ಥಿಯೊಬ್ಬ ಗಂಭೀರವಾಗಿದ್ದಾನೆ. ಈ ರೀತಿ ಗೋಲಿಬಾರ್ ನಡೆಸುವ ಅಗತ್ಯ ಪೊಲೀಸರಿಗೆ ಏನಿತ್ತು? ಪೊಲೀಸರೇ ಹೇಳುವಂತೆ ಅಲ್ಲಿ ಗಲಭೆ ನಡೆದಿದ್ದರೂ ಆ ಜನರನ್ನು ನಿಯಂತ್ರಣ ಪಡೆಯಲು ಉಪ ಕ್ರಮಗಳನ್ನು ಬಳಸದೆ ಗೋಲಿಬಾರ್ನಂತಹ ಕೃತ್ಯಕ್ಕೆ ಪೊಲೀಸರು ಮುಂದಾಗಿ್ದು ಯಾಕೆ ಎಂದವರು ಪ್ರಶ್ನಿಸಿದರು.
ಸಮಗ್ರ ಪ್ರಕರಣದ ಕುರಿತು ಸತ್ಯಾಂಶ ಹೊರಬೇಕಿದ್ದರೆ ಸ್ವತಂತ್ರ ನ್ಯಾಯಾಂಗ ತನಿಖೆ ಆಗಬೇಕು ಎಂಬುದು ನಮ್ಮ ಆಗ್ರಹ ಎಂದು ಅವರು ಹೇಳಿದರು.
ಪೊಲೀಸ್ ಪ್ರಾಯೋಜಿತ ಹಿಂಸಾಚಾರ
ಕೇರಳದ ಇನ್ನೋರ್ವ ರಾಜ್ಯಸಭಾ ಸದಸ್ಯ ಕೆ.ಕೆ. ರಾಜೇಶ್ ಮಾತನಾಡಿ, ಸಂವಿಧಾನವು ನಮಗೆ ಮಾತನಾಡುವ ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ನೀಡಿದೆ. ಆದರೆ ಅದನ್ನು ಹತ್ತಿಕ್ಕುವ ಜತೆಗೆ ಇಲ್ಲಿ ಮಾಧ್ಯಮ ಸ್ವಾತಂತ್ರವನ್ನು ಹತ್ತಿಕ್ಕಲಾಗಿದೆ. ಕೇರಳದ ಪತ್ರಕರ್ತರನ್ನು ಬಂಧಿಸಿ ಅವರ ಕರ್ತವ್ಯಕ್ಕೆ ತಡೆ ಒಡ್ಡಲಾಗಿದೆ. ಮಂಗಳೂರಿನಲ್ಲಿ ನಡೆದ ಗಲಭೆ ಪೊಲೀಸ್ ಪ್ರಾಯೋಜಿತ ಹಿಂಸಾಚಾರ ಎಂದು ಆರೋಪಿಸಿದರು.
ಗೋಲಿಬಾರ್ಗೆ ಮೃತಪಟ್ಟವರು ಪ್ರತಿಭಟನೆಯಲ್ಲಿ ಭಾಗವಹಿಸಿದವರಲ್ಲ. ಆರಂಭದಲ್ಲಿ ಅಲ್ಲಿ ಸೇರಿದ್ದು ಸುಮಾರು 200ರಷ್ಟು ಜನರೆಂದು ನಮಗೆ ಮಾಹಿತಿ ದೊರಕಿದೆ. ಪ್ರತಿಭಟಿಸುವ ಹಕ್ಕನ್ನು ನಮಗೆ ಸಂವಿಧಾನ ನೀಡಿದೆ. ಒಂದು ವೇಳೆ ಪೊಲೀಸರು ಹೇಳುವಂತೆ ಅದು ಅಕ್ರಮವಾಗಿದ್ದಲ್ಲಿ 500ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪೊಲೀಸರಿಂದ ಪ್ರತಿಭಟನಾಕರನ್ನು ವಶಕ್ಕೆ ಪಡೆಯುವ ಕಾರ್ಯ ಮಾಡಬಹುದಿತ್ತು. ಆದರೆ ಲಾಠಿ ಚಾರ್ಜ್ ಮಾಡುವ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಬಳಿಕ ಯಾವುದೇ ಮುನ್ಸೂಚನೆಯನ್ನೂ ನೀಡದೆ ಗೋಲಿಬಾರ್ ನಡೆಸಿ ಅಮಾಯಕರ ಬಲಿ ಪಡೆದಿದ್ದಾರೆ ಎಂದು ಅವರು ಆರೋಪಿಸಿದರು.
ದೇಶದಲ್ಲಿ ಕಾಯ್ದೆ ಮೂಲಕ ಮತೀಯ ಆಧಾರದಲ್ಲಿ ವಿಭಜಿಸುವ ಪ್ರಕ್ರಿಯೆ ನಡೆಯುತ್ತಿದ್ದರೆ, ಇಲ್ಲಿ ಸಚಿವರು, ಸಂಸದರು ಭಾಷೆಯ ಆಧಾರದಲ್ಲಿ ದ್ವೇಷ ಸೃಷ್ಟಿಸುವ ಕೆಲಸವನ್ನು ಮಾಡುತ್ತಿರುವುದು ದುರದೃಷ್ಟಕರ. ಈ ಮೂಲಕ ಅವರು ಜನಪ್ರತಿನಿಧಿಗಳಾದ ಸ್ವೀಕರಿಸಿದ ಪ್ರತಿಜ್ಞೆಯನ್ನೇ ಉಲ್ಲಂಘಿಸಿದ್ದಾರೆ ಎಂದು ರಾಜೇಶ್ ಆಪಾದಿಸಿದರು.
ಸಿಪಿಎಂನ ರಾಜ್ಯ ನಾಯಕಿ ವರಮಹಾಲಕ್ಷ್ಮಿ ಮಾತನಾಡಿ, ಸಂವಿಧಾನದ ಕಲಂ 14ರ ಪ್ರಕಾರ ಜಾತಿ ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ. ಆದರೆ ವಿಪಕ್ಷ ನಾಯಕರಿಗೆ ಹಾಗೂ ಸಿಪಿಎಂ ನಾಯಕರಿಗೂ ಘಟನಾ ಸಂದರ್ಭ ಮಂಗಳೂರಿಗೆ ಭೇಟಿ ನಿರಾಕರಿಸಲಾಗಿತ್ತು. ಮಂಗಳೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಮಾನವೀಯತೆ ದೃಷ್ಟಿಯಿಂದ ಮೃತರ ಮನೆಗಳಿಗೆ ಭೇಟಿ ನೀಡಿಲ್ಲ. ಆಸ್ಪತ್ರೆಗೂ ಭೇಟಿ ನೀಡಿಲ್ಲ. ಅವರು ಕೇವಲ ಬಿಜೆಪಿ ಮುಖ್ಯಮಂತ್ರಿ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಕಲ್ಲು ತೂರಾಟ ಮಾಡಿದ್ದರೆ ಅದು ಕೂಡಾ ನ್ಯಾಯಾಂಗ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಮೃತಪಟ್ಟವರಲ್ಲಿ ಒಬ್ಬರ ಬೆನ್ನಿಗೆ ಗುಂಡೇಟು ತಗಲಿದೆ. ಹಾಗಿದ್ದರೆ ಬೆನ್ನು ಹಾಕಿ ಪೊಲೀಸರ ಮೇಲೆ ದಾಳಿ ನಡೆಸುವುದು ಹೇಗೆ ಎಂಬ ಎಲ್ಲಾ ವಿಷಯವೂ ತನಿಖೆಯಿಂದ ಹೊರಬರಲಿದೆ. ಅದಕ್ಕಾಗಿಯೇ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿರುವುದಾಗಿ ಸುದ್ದಿಗಾರರ ಪ್ರಶ್ನೆಯೊಂಕ್ಕೆ ಪಿ. ಕರುಣಾಕರನ್ ತಿಳಿಸಿದರು.
ಗೋಷ್ಠಿಯಲ್ಲಿ ಶಾಸಕರಾದ ರಾಜಗೋಪಾಲನ್, ಕೆ. ಕುಂಞಿರಾಮನ್, ಮಾಜಿ ಆಸಕ ಸಿ.ಎಚ್. ಕುಂಞಂಬು, ಕೆ.ಆರ್. ಜಯಾನಂದ್, ಜಿಲ್ಲಾ ನಾಯಕರಾದ ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ, ಮುನೀರ್ ಕಾಟಿಪ್ಳ, ಯಾದವ ಶೆಟ್ಟಿ ಉಪಸ್ಥಿತರಿದ್ದರು.
ರಾಜ್ಯ, ಭಾಷೆ ಆಧಾರದಲ್ಲಿ ಎತ್ತಿಕಟ್ಟುವುದು ದುರದೃಷ್ಟಕರ
ಪದವಿ ಇಲಾಖೆಯ ಜಂಟಿ ನಿರ್ದೇಶಕರು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಸೆಕ್ಷನ್ ಇರುವ ಸಂದರ್ಭ ವಿದ್ಯಾರ್ಥಿಗಳು ಬೀದಿಗಿಳಿದು ನಿಷೇಧಾಜ್ಞೆ ಉಲ್ಲಂಘಿಸದಂತ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಅದು ಸರಿ. ಆದರೆ, ಕೇರಳ ರಾಜ್ಯದ ವಿದ್ಯಾರ್ಥಿಗಳ ಮೇಲೆ ಪ್ರತ್ಯೇಕ ನಿಗಾ ಇರಿಸುವಂತೆ ಸೂಚಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ರಾಜ್ಯ, ಭಾಷೆ ಆಧಾರದಲ್ಲಿ ಎತ್ತಿಕಟ್ಟುವ ಕೆಲಸವನ್ನು ಸರಕಾರ ಅಥವಾ ಪ್ರಭುತ್ವ ಮಾಡಬಾರದು ಎಂದು ವರಮಹಾಲಕ್ಷ್ಮಿ ಹೇಳಿದರು.







