ಸೌದಿಯಲ್ಲಿ ವ್ಯಕ್ತಿ ಬಂಧನ: ವಾರ್ತಾ ಇಲಾಖೆಯಿಂದ ತುರ್ತು ಸ್ಪಂದನೆ

ಉಡುಪಿ : ಫೇಸ್ಬುಕ್ನಲ್ಲಿ ಸೌದಿ ದೊರೆಯ ಕುರಿತು ಅವಹೇಳನ ಪೋಸ್ಟ್ ಹಾಕಿದ ಆರೋಪದಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿತನಾಗಿರುವ ಗೋಪಾಡಿ ಗ್ರಾಮದ ಹರೀಶ್ ಬಂಗೇರಾ ಅವರ ಕುರಿತು ಸೋಮವಾರ ಪತ್ರಿಕೆ ಗಳಲ್ಲಿ ಪ್ರಕಟಗೊಂಡ ವರದಿಯನ್ನು ವೀಕ್ಷಿಸಿದ, ರಾಜ್ಯ ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗಳು ಕೂಡಲೇ ರಿಯಾದ್ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಭಾರತೀಯ ದೂತವಾಸದ ಅಧಿಕಾರಿಗಳೊಂದಿಗೆ ಮಾತನಾಡಿದ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್, ಆದಷ್ಟು ಶೀಘ್ರದಲ್ಲಿ ಹರೀಶ್ ಬಂಗೇರ ಅವರ ಬಿಡುಗಡೆಗೆ ಅಗತ್ಯ ಕ್ರಮ ವಹಿಸುವಂತೆ ಕೋರಿದರು. ಈ ಪ್ರಕರಣವು ಕಾನೂನು ಮೂಲಕ ಇತ್ಯರ್ಥ ವಾಗಬೇಕಾಗಿದ್ದು, ಸ್ವಲ್ಪವಿಳಂಬವಾಗಲಿದೆ. ಬಂಧನದಲ್ಲಿ ರುವ ಅವರು ಕ್ಷೇಮವಾಗಿದ್ದಾರೆ ಎಂದು ದೂತವಾಸದ ಅಧಿಕಾರಿಗಳು, ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.
ಮಂಗಳವಾರ ಹರೀಶ್ ಬಂಗೇರಾ ಅವರ ಪತ್ನಿ ಸುಮನ ಬಂಗೇರಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕಾರ್ಯದರ್ಶಿ ಗಳು, ಪ್ರಕರಣದ ಪ್ರಗತಿ ಬಗ್ಗೆ ಮಾಹಿತಿ ನೀಡಿ, ಸರಕಾರವು ತಮ್ಮ ಪರವಾಗಿ ನಿಂತಿದ್ದು, ಆದಷ್ಟು ಶೀಘ್ರದಲ್ಲಿ ತಮ್ಮ ಪತಿಯ ಬಿಡುಗಡೆಗೆ ಪ್ರಯತ್ನಿಸಲಾಗು ವುದು ಎಂದು ಧೈರ್ಯ ತುಂಬಿದರು.
ನಂತರ ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗೋಪಾಡಿ ಗ್ರಾಮದಲ್ಲಿನ ಹರೀಶ್ ಬಂಗೇರಾ ಅವರ ಮನೆಗೆ ಭೇಟಿ ನೀಡಿ, ಅವರ ಪತ್ನಿಗೆ ಈ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.







