ಎನ್ಆರ್ಸಿಗೆ ಎನ್ಡಿಎ ಮಿತ್ರಪಕ್ಷದಿಂದಲೇ ಅಪಸ್ವರ
ಹೊಸದಿಲ್ಲಿ, ಡಿ.25: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್ಆರ್ಸಿ) ಪ್ರಸ್ತಾವವನ್ನು ಆಡಳಿತಾರೂಢ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳ ಬಲವಾಗಿ ವಿರೋಧಿಸಿದೆ. ಜತೆಗೆ ಪೌರತ್ವ ತಿದ್ದುಪಡಿ ಕಾಯ್ದೆಯ ವ್ಯಾಪ್ತಿಯಲ್ಲಿ ಪೌರತ್ವ ಬಯಸುವ ಮುಸ್ಲಿಂ ನಿರಾಶ್ರಿತರನ್ನೂ ಸೇರಿಸಬೇಕು ಎಂದು ಪ್ರತಿಪಾದಿಸಿದೆ.
ಪಕ್ಷದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ನರೇಶ್ ಗುಜ್ರಾಲ್ ಈ ಸಂಬಂಧ ಎನ್ಡಿಟಿವಿ ಜತೆ ಮಾತನಾಡಿ, "ಪೌರತ್ವ ಕಾಯ್ದೆಯಲ್ಲಿ ಮುಸ್ಲಿಂ ಸಮುದಾಯವನ್ನೂ ಸೇರಿಸಬೇಕು ಎನ್ನುವುದು ನಮ್ಮ ಅಭಿಪ್ರಾಯ" ಎಂದು ಸ್ಪಷ್ಟಪಡಿಸಿದರು. ಸಿಎಎಗೆ ಸಂಬಂಧಿಸಿದಂತೆ ಅಕಾಲಿದಳದ ನಿಲುವು ಗೊಂದಲದಲ್ಲಿದೆ ಎನ್ನುವುದನ್ನು ಒಪ್ಪಿಕೊಂಡ ಅವರು, ಧಾರ್ಮಿಕ ಕಿರುಕುಳದಿಂದಾಗಿ ಓಡಿಬಂದ ಸಿಕ್ಖರು ದೇಶದಲ್ಲಿ ಪೌರತ್ವ ಇಲ್ಲದೇ ಬದುಕುತ್ತಿದ್ದಾರೆ ಎಂದು ವಿವರಿಸಿದರು.
"ನಾವು ಸಿಎಎ ಪರ ಮತ ಚಲಾಯಿಸಿದ್ದೇವೆ. ಆದರೆ ಈ ವ್ಯಾಪ್ತಿಯಲ್ಲಿ ಮುಸ್ಲಿಮರನ್ನೂ ಸೇರಿಸಬೇಕು ಎಂದು ಪಕ್ಷದ ಮುಖ್ಯಸ್ಥ ಸುಖ್ಬೀರ್ ಬಾದಲ್ ಒತ್ತಾಯಿಸಿದ್ದಾರೆ. ನಮಗೆ ಇದು ಗೊಂದಲದ ಸ್ಥಿತಿ; ಏಕೆಂದರೆ 60ರಿಂದ 70 ಸಾವಿರ ಸಿಕ್ಖರ್ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ತಾಲಿಬಾನ್ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಓಡಿಬಂದು 10-12 ವರ್ಷಗಳಿಂದ ಪೌರತ್ವ ಇಲ್ಲದೇ ಬದುಕುತ್ತಿದ್ದಾರೆ ಎಂದು ಹೇಳಿದರು.
"ಅಕಾಲಿದಳ ಸಿಕ್ಖ್ ಸಮುದಾಯವನ್ನು ಪ್ರತಿನಿಧಿಸುತ್ತದೆ. ಆದರೆ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆ ಇದೆ. ನಾವು ಮತ ಹಾಕಿದ್ದೇವೆ. ಆದರೆ ಕಾಯ್ದೆಯಲ್ಲಿ ಮುಸ್ಲಿಮರನ್ನೂ ಸೇರಿಸಬೇಕು ಎಂದು ಬಾದಲ್ ಸ್ಪಷ್ಟಪಡಿಸಿದ್ದಾರೆ" ಎಂದು ಗುಜ್ರಾಲ್ ತಿಳಿಸಿದರು.
"ನಾವು ಎನ್ಆರ್ಸಿ ವಿರೋಧಿಸುತ್ತೇವೆ ಎಂದು ಖಡಾಖಂಡಿತವಾಗಿ ಹೇಳುತ್ತೇವೆ... ಏಕೆಂದರೆ ಅದು ಅಲ್ಪಸಂಖ್ಯಾತ ಸಮುದಾಯದಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸುತ್ತದೆ. ಬಿಜೆಪಿ ಎನ್ಆರ್ಸಿ ವಿಚಾರದಲ್ಲಿ ತನ್ನ ನಿಲುವು ಪುನರ್ ಪರಿಶೀಲಿಸಿ ಪೌರತ್ವ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುತ್ತದೆ ಎಂಬ ಆಶಯ ನಮ್ಮದು. ದೇಶದಲ್ಲಿ ಹಿಂಸಾಚಾರ, ಸಾವು ನಡೆಯಬಾದರು. ಇದನ್ನು ಕೊನೆಗಾಣಿಸಬೇಕು" ಎಂದು ಸಲಹೆ ಮಾಡಿದರು.