ಮಲ್ಪೆಯಿಂದ ಪೊಲಿಪುವರೆಗೆ ಮ್ಯಾರಥಾನ್ ಸ್ಪರ್ಧೆ
ಪಡುಬಿದ್ರಿ: ಪೊಲಿಪು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಶತ, ವಜ್ರ, ಸ್ವರ್ಣ ಸಂಭ್ರಮದ ಸವಿನೆನಪಿಗಾಗಿ ಸರ್ಕಾರಿ ಶಾಲೆ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಮ್ಯಾರಥಾನ್ ಸ್ಪರ್ಧೆ ಬುಧವಾರ ನಡೆಯಿತು.
ಡಾ. ಬಿ.ಆರ್. ಶೆಟ್ಟಿ ಮತ್ತು ಸಿ.ಆರ್. ಶೆಟ್ಟಿ ಫೌಂಡೇಶನ್ ಬೆಂಗಳೂರು ಪ್ರಾಯೋಜಕತ್ವದಲ್ಲಿ 14 ಕಿ.ಮೀ.ಗಳ ಮ್ಯಾರಥಾನ್ ಮಲ್ಪೆ ಬಸ್ ನಿಲ್ದಾಣದಿಂದ ಕಾಪು ಪೊಲಿಪುವರೆಗೆ ನಡೆಯಿತು. ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮುಂಜಾನೆ ಚಾಲನೆ ನೀಡಿದರು. ಮುಕ್ತವಾಗಿ ನಡೆದ ಮ್ಯಾರಥಾನ್ ಸ್ಪರ್ಧೆಯಲ್ಲಿ ಅವಿಭಜಿತ ಜಿಲ್ಲೆಯ ಸುಮಾರು 300 ಮಂದಿ ಸ್ಪರ್ಧಿಗಳು ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.
ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಸಚಿನ್ (ಪ್ರಥಮ) ಮಣಿಕಂಠ(ದ್ವಿತೀಯ), (ತೃತೀಯ), ಮಹಿಳಾ ವಿಭಾಗದಲ್ಲಿ ಮಾಲಾಶ್ರೀ ಎಂ.ಬಿ., ಕಾವ್ಯ, ಅಂಜಲಿ ಶಾರ್ವಿ, ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.
ಬಾಲಕರ ವಿಭಾಗದಲ್ಲಿ ದಿನೇಶ್(ಪ್ರಥಮ), ಸಂಗಮೇಶ್ ಹಾಗೂ ಸತೀಶ್ (ದ್ವಿತೀಯ ಮತ್ತು ತೃತೀಯ), ಬಾಲಕಿಯರ ವಿಭಾಗದಲ್ಲಿ ಪ್ರಣಮ್ಯ ಎಂ, ಚೈತ್ರ ಪಿ (ಪ್ರಥಮ, ದ್ವಿತೀಯ) ಹಾಗೂ ಪ್ರತೀಕ್ಷಾ (ತೃತೀಯ) ಬಹುಮಾನಕ್ಕೆ ಪಾತ್ರರಾದರು.
ಸರ್ಕಾರಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಕೀಳರಿಮೆ ಬಿಟ್ಟು ಅಲ್ಲಿ ವ್ಯಾಸಂಗ ಮಾಡಿ ಸಾಧನೆ ಮಾಡಿದವರನ್ನು ಆದರ್ಶವಾಗಿರಿಸಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೇರಿಸಲು ಪ್ರಯತ್ನಿಸಬೇಕು. ಅದಕ್ಕಾಗಿ ಪಾಲಕರು ಹಾಗೂ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಸಂಘಟಿತರಾಗಿ ಕೆಲಸ ಮಾಡಬೇಕು. ಯುವ ಪೀಳಿಗೆಯು ವಿಶ್ವಾಸವನ್ನು ಕಳೆದುಕೊಳ್ಳದೇ, ಧೈರ್ಯ ಹಾಗೂ ನಿರ್ಧಿಷ್ಟ ಗುರಿಯೊಂದಿಗೆ ಸಾಧನೆ ಮಾಡುವ ಛಲದೊಂದಿಗೆ ಮುನ್ನಡೆಯಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕಿವಿಮಾತು ಹೇಳಿದರು.
ಶಾಸಕ ಲಾಲಾಜಿ ಆರ್. ಮೆಂಡನ್, ಬಾವುಗುತ್ತು ರಘುರಾಮ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಶತ, ವಜ್ರ, ಸ್ವರ್ಣ ಸಂಭ್ರಮದ ಕಾರ್ಯಾಧ್ಯಕ್ಷ ಸರ್ವೋತ್ತಮ್ ಕುಂದರ್, ಪ್ರಧಾನ ಕಾರ್ಯದರ್ಶಿ ಕಿರಣ್ ಆಳ್ವ, ಡಾ.ಶಿಶಿರ್ ಶೆಟ್ಟಿ, ಡೊಮಿನಿಕ್ ಥಾಮಸ್,, ಕಾಲೇಜು ಪ್ರ್ರಾಂಶುಪಾಲ ಪಂಡರೀನಾಥ, ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕಿ ರಮಣಿ ವೈ, ಪ್ರಾಥಮಿಕ ವಿಭಾಗ ಮುಖ್ಯೋಪಾಧ್ಯಾಯಿನಿ ಎಚ್.ಎಸ್.ಅನಸೂಯಾ, ಉಡುಪಿ ನಗರಸಭೆ ಸದಸ್ಯರಾದ ಲಕ್ಷ್ಮೀ ಮಂಜುನಾಥ್, ಎಡ್ಲಿನ್ ಕರ್ಕಡ ಉಪಸ್ಥಿತರಿದ್ದರು.