ಮಂಗಳೂರು ಆಸ್ಪತ್ರೆಯಲ್ಲಿ ಪೊಲೀಸರ ನಡವಳಿಕೆ ಅಮಾನವೀಯ
ಅಲಯನ್ಸ್ ಆಫ್ ಡಾಕ್ಟರ್ಸ್ ಫಾರ್ ಎಥಿಕಲ್ ಹೆಲ್ತ್ ಕೇರ್ ಖಂಡನೆ
ಹೊಸದಿಲ್ಲಿ,ಡಿ.25: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್ಆರ್ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಗಾಯಾಳುಗಳ ಬಗ್ಗೆ ಪೊಲೀಸರ ಅಮಾನವೀಯ,ಕಾನೂನು ಬಾಹಿರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಅಲಯನ್ಸ್ ಆಫ್ ಡಾಕ್ಟರ್ಸ್ ಫಾರ್ ಎಥಿಕಲ್ ಹೆಲ್ತ್ಕೇರ್ (ಎಡಿಇಎಚ್),ಪೊಲೀಸ್ ಅತಿರೇಕಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದೆ.
ಪೊಲೀಸ್ ಹಿಂಸಾಚಾರದಿಂದ ಗಾಯಗೊಂಡಿದ್ದ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲೂ ಪೊಲೀಸರು ಅವಕಾಶ ನೀಡಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕಿಂತಲೂ ಕೆಟ್ಟದ್ದು ಮಂಗಳೂರಿನಲ್ಲಿ ನಡೆದಿದೆ. ಗಾಯಾಳುಗಳನ್ನು ತರಲಾಗಿದ್ದ ಹೈಲ್ಯಾಂಡ್ ಆಸ್ಪತ್ರೆಗೆ ನುಗ್ಗಿ ಪೊಲೀಸರು ದಾಂಧಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ರೋಗಿಗಳ ಬಂಧುಗಳನ್ನು ಲಾಠಿಗಳಿಂದ ಥಳಿಸಿ ರೋಗಿಗಳು, ವೈದ್ಯರು ಮತ್ತು ಸಿಬ್ಬಂದಿಗಳಿಗೆ ಭೀತಿಯನ್ನು ಹುಟ್ಟಿಸಿದ್ದರು ಎಂದು ಹೇಳಿರುವ ಎಡಿಇಎಚ್,ಈ ದೇಶದಲ್ಲಿ ಹಲವಾರು ಪ್ರತಿಭಟನೆಗಳನ್ನು ನಾವು ನೋಡಿದ್ದೇವೆ. 1975ರಲ್ಲಿ ತುರ್ತು ಪರಿಸ್ಥಿತಿಯಿದ್ದಾಗಲೂ ಆಸ್ಪತ್ರೆಗಳಿಗೆ ಯಾವುದೇ ತೊಂದರೆಗಳಾಗಿರಲಿಲ್ಲ. ಆದರೆ ಈಗ ನಡೆಯುತ್ತಿರುವುದನ್ನು ನಾವು ಮೊದಲ ಬಾರಿಗೆ ನೋಡುತ್ತಿದ್ದೇವೆ. ಯಾವುದು ಏನೇ ಇದ್ದರೂ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಪ್ರತಿಯೊಬ್ಬ ವೈದ್ಯರ ಮೊದಲ ಕರ್ತವ್ಯವಾಗಿದೆ ಮತ್ತು ಇದರಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಅಧಿಕಾರವಿಲ್ಲ ಎಂದು ತಿಳಿಸಿದೆ.
ಜಾಮಿಯಾ ಗಾಯಾಳುಗಳ ವಿರುದ್ಧ ಕೆಲವು ವೈದ್ಯರು ಕೋಮುವಾದಿ ಮತ್ತು ಅವಮಾನಕಾರಿ ಭಾಷೆಯನ್ನು ಬಳಸಿದ್ದರು ಮತ್ತು ಚಿಕಿತ್ಸೆಯನ್ನು ನಿರಾಕರಿಸಿದ್ದರು ಎಂದು ಮಾಧ್ಯಮ ವರದಿಗಳು ಹೇಳಿವೆ. ಈ ವಿಷಯ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ಪಡೆಯಲು ಪೊಲೀಸರ ಅಡ್ಡಿಗಳ ಕುರಿತು ಮಾನವ ಹಕ್ಕು ಆಯೋಗವು ತನಿಖೆ ನಡೆಸಬೇಕು ಎಂದಿರುವ ಎಡಿಇಎಚ್,ಪೊಲೀಸ್ ದೌರ್ಜನ್ಯಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರು ಮತ್ತು ಅವರ ಉಸ್ತುವಾರಿ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು,ವೈದ್ಯರಿಂದ ಗಾಯಾಳುಗಳ ನಿಂದನೆ ಕುರಿತು ಮಾನವ ಹಕ್ಕು ಆಯೋಗ ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಪೂರ್ವ ನಿಯಾಮಕ ತನಿಖೆಯನ್ನು ನಡೆಸಬೇಕು ಹಾಗೂ ಆಸ್ಪತ್ರೆಗಳ ಕರ್ತವ್ಯಗಳಲ್ಲಿ ಮಧ್ಯೆ ಪ್ರವೇಶಿಸದಂತೆ,ಅವುಗಳಿಗೆ ಬೆದರಿಕೆಯೊಡ್ಡದಂತೆ ಮತ್ತು ಗಾಯಾಳುಗಳು ಚಿಕಿತ್ಸೆ ಪಡೆಯಲು ಅಡ್ಡಿಯೊಡ್ಡದಂತೆ ಪೊಲೀಸ್ ಮತ್ತು ಇತರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶ ನೀಡಬೇಕು ಎಂದು ಆಗ್ರಹಿಸಿದೆ.
ಹಿಂಸೆ,ದ್ವೇಷ,ಧರ್ಮಾಂಧತೆಯಿಂದ ದೂರವವಿರುವಂತೆ ಮತ್ತು ಮಾನವ ಹಕ್ಕುಗಳ್ನು ಎತ್ತಿಹಿಡಿಯುವಂತೆ ಸಂಬಂಧಿತ ಎಲ್ಲರನ್ನು ಎಡಿಇಎಚ್ ಕೋರಿಕೊಂಡಿದೆ.